ಮಂಗಳೂರು: ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಸ್ವಾಯತ್ತ) ತನ್ನ ಬೆಳ್ಳಿ ಮಹೋತ್ಸವ ಆಚರಣೆಗಳನ್ನು ಫೆಬ್ರವರಿ 25ರ ಬುಧವಾರ ಅಧಿಕೃತವಾಗಿ ಉದ್ಘಾಟಿಸಲು ಸಜ್ಜಾಗಿದೆ. ಉದ್ಘಾಟನಾ ಸಮಾರಂಭವು ಕಾಲೇಜು ಕ್ಯಾಂಪಸ್ನಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಇದಕ್ಕೂ ಮುನ್ನ ಬೆಳಿಗ್ಗೆ 9 ಗಂಟೆಗೆ ಸಂತ ಪಿಯೋ ಚಾಪೆಲ್ನಲ್ಲಿ ಯೂಕರಿಸ್ಟಿಕ್ ಆಚರಣೆ ಜರುಗಲಿದೆ.

ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತಾಡಿದ ಆಯೋಜಕರು, ಉದ್ಘಾಟನಾ ಸಮಾರಂಭವನ್ನು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಮುಖ್ಯ ಅತಿಥಿಯಾಗಿ ಉದ್ಘಾಟಿಸಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಶಾಸಕ ಡಾ. ಭರತ್ ಶೆಟ್ಟಿ, ಮಾಜಿ ಸಚಿವ ರಾಮನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೌಜಾ ಹಾಗೂ ಮಾಜಿ ಶಾಸಕ ಜಿ.ಆರ್. ಲೋಬೋ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಕಾಲೇಜಿನ ಅಧ್ಯಕ್ಷರಾದ ಡಾ. ಪೀಟರ್ ಪೌಲ್ ಸಲ್ದಾನ್ಹಾ ವಹಿಸಲಿದ್ದಾರೆ. ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಜೆರಾಲ್ಡ್ ಐಸಾಕ್ ಲೋಬೋ ಹಾಗೂ ಸಂಸ್ಥಾಪಕಾಧ್ಯಕ್ಷ ಡಾ. ಆಲೋಯಸ್ ಪಾಲ್ ಡಿ’ಸೌಜಾ ಉಪಸ್ಥಿತರಿರಲಿದ್ದಾರೆ.

ಕಾರ್ಯಕ್ರಮದಲ್ಲಿ ಮೆರವಣಿಗೆ, ದೀಪ ಬೆಳಗಿಸುವ ವಿಧಿ, ಬೆಳ್ಳಿ ಮಹೋತ್ಸವ ಲೋಗೋ ಅನಾವರಣ, ವಿದ್ಯಾರ್ಥಿವೇತನ ಹಾಗೂ ಸಿಬ್ಬಂದಿ ಕಲ್ಯಾಣ ಯೋಜನೆಗಳ ಘೋಷಣೆ, ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಹಾಗೂ ಸ್ಮರಣಾರ್ಥ ಮೂಲಸೌಕರ್ಯ ಯೋಜನೆಗಳ ಮಾಹಿತಿ ನೀಡಲಾಗುವುದು.ಬೆಳ್ಳಿ ಮಹೋತ್ಸವ ಆಚರಣೆಗಳು ಫೆಬ್ರವರಿ 2026ರಿಂದ ಫೆಬ್ರವರಿ 2027ರವರೆಗೆ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಮುದಾಯ ಕಾರ್ಯಕ್ರಮಗಳೊಂದಿಗೆ ನಡೆಯಲಿವೆ ಎಂದರು.

ಸಂಸ್ಥೆಯು ಔಟ್ಕಮ್ ಬೇಸ್ಡ್ ಎಜುಕೇಶನ್ ಅನುಷ್ಠಾನ, ಎನ್ಬಿಎ ಮಾನ್ಯತೆ, ನ್ಯಾಕ್ A+ ಶ್ರೇಣಿ ಹಾಗೂ 2021ರಲ್ಲಿ ಸ್ವಾಯತ್ತ ಸ್ಥಾನಮಾನ ಸೇರಿದಂತೆ ಪ್ರಮುಖ ಮೈಲುಗಲ್ಲುಗಳನ್ನು ಸಾಧಿಸಿದ್ದು, ಇತ್ತೀಚೆಗೆ ನವೀನತೆ ಮತ್ತು ಉದ್ಯಮಶೀಲತೆಯ ಪ್ರಾದೇಶಿಕ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಆಯೋಜಕರು ಮಾಹಿತಿ ನೀಡಿದರು.
