ಟಿ20 ವಿಶ್ವಕಪ್ 2026 ವಿವಾದ: ಬಾಂಗ್ಲಾದೇಶದ ಆಂತರಿಕ ಅಶಾಂತಿ ಹಿನ್ನೆಲೆ, ಐಸಿಸಿ–ಬಿಸಿಬಿ ಸಂಘರ್ಷ ತೀವ್ರ

ನವದೆಹಲಿ: ಟಿ20 ವಿಶ್ವಕಪ್ 2026ಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (BCB) ಮುಂದಿಟ್ಟಿರುವ ಗುಂಪು ವಿನಿಮಯ ಪ್ರಸ್ತಾಪದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಬೆಳವಣಿಗೆಯ ಹಿಂದೆ, ಬಾಂಗ್ಲಾದೇಶದಲ್ಲಿ ಇತ್ತೀಚಿನ ದಿನಗಳಲ್ಲಿ  ಹಿಂದೂಗಳ ಮೇಲಿನ ಹಲ್ಲೆ ಮತ್ತು ಕೊಲೆಗಳ ಬಗ್ಗೆ ವರದಿಗಳು ಬರುತ್ತಿರುವುದು ಹಾಗೂ ಉಂಟಾಗಿರುವ ಆಂತರಿಕ ಅಶಾಂತಿ ಪ್ರಮುಖ ಕಾರಣಗಳಾಗಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಹಿನ್ನಲೆಯಲ್ಲಿ, ಬಾಂಗ್ಲಾದೇಶ ಕ್ರಿಕೆಟ್ ತಂಡದ ನಾಯಕ ಲಿಟ್ಟನ್ ದಾಸ್ ಪ್ರತಿಕ್ರಿಯಿಸಿದ್ದು, ಇಡೀ ಪರಿಸ್ಥಿತಿ ಅನಿಶ್ಚಿತತೆಯಿಂದ ಕೂಡಿದೆ ಎಂದು ಹೇಳಿದ್ದಾರೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಪಂದ್ಯದ ಬಳಿಕ ಮಾತನಾಡಿದ ಅವರು, ಟಿ20 ವಿಶ್ವಕಪ್ ವಿವಾದಕ್ಕೆ ಸಂಬಂಧಿಸಿದ ಪ್ರಶ್ನೆಗೆ ನೇರ ಉತ್ತರ ನೀಡಲು ನಿರಾಕರಿಸಿದರು.

“ನಾವು ವಿಶ್ವಕಪ್ ಆಡಲಿದ್ದೇವೆ ಎಂದು ನಿಮಗೆ ಖಚಿತವಾಗಿದೆಯೇ? ಈ ಕ್ಷಣದಲ್ಲಿ ಎಲ್ಲವೂ ಅನಿಶ್ಚಿತ. ಇಡೀ ಬಾಂಗ್ಲಾದೇಶವೇ ಅನಿಶ್ಚಿತತೆಯಲ್ಲಿದೆ. ನೀವು ಕೇಳಲಿರುವ ಪ್ರಶ್ನೆ ನನಗೆ ಅರ್ಥವಾಗುತ್ತಿದೆ, ಆದರೆ ಅದಕ್ಕೆ ಉತ್ತರಿಸುವುದು ನನಗೆ ಸುರಕ್ಷಿತವಲ್ಲ,” ಎಂದು ಲಿಟ್ಟನ್ ದಾಸ್ ಹೇಳಿದ್ದಾರೆ. ಅವರ ಈ ಹೇಳಿಕೆ, ದೇಶದೊಳಗಿನ ಪರಿಸ್ಥಿತಿ ಎಷ್ಟು ಸೂಕ್ಷ್ಮವಾಗಿದೆ ಎಂಬುದನ್ನು ಸೂಚಿಸುತ್ತದೆ.

ಇದಕ್ಕೂ ಮುನ್ನ, ಐಸಿಸಿ ಜನವರಿ 21ರೊಳಗೆ ಸ್ಪಷ್ಟ ಉತ್ತರ ನೀಡುವಂತೆ ಬಿಸಿಬಿಗೆ ಕೊನೆ ಎಚ್ಚರಿಕೆ ನೀಡಿದೆ. ಈ ನಡುವೆ, ಬಾಂಗ್ಲಾದೇಶ ಸರ್ಕಾರದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಮಾತನಾಡಿ, “ಯಾವುದೇ ಷರತ್ತುಗಳ ಅಡಿಯಲ್ಲಿ ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಯಾಣಿಸುವುದಿಲ್ಲ. ಐಸಿಸಿ ಒತ್ತಡ ಹೇರಲು ಯತ್ನಿಸಿದರೆ, ಆ ಷರತ್ತುಗಳನ್ನು ನಾವು ಸ್ವೀಕರಿಸುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

ಟಿ20 ವಿಶ್ವಕಪ್ 2026ರಲ್ಲಿ ಬಾಂಗ್ಲಾದೇಶವನ್ನು ಇಂಗ್ಲೆಂಡ್, ಇಟಲಿ, ವೆಸ್ಟ್ ಇಂಡೀಸ್ ಮತ್ತು ನೇಪಾಳದೊಂದಿಗೆ ಗ್ರೂಪ್ ಸಿಯಲ್ಲಿ ಸೇರಿಸಲಾಗಿದೆ. ಪ್ರಸ್ತುತ ವೇಳಾಪಟ್ಟಿಯಂತೆ, ಬಾಂಗ್ಲಾದೇಶ ತನ್ನ ಎಲ್ಲಾ ಪಂದ್ಯಗಳನ್ನು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಆಡಬೇಕಾಗಿದೆ. ಆದರೆ ದೇಶದೊಳಗಿನ ಭದ್ರತಾ ಪರಿಸ್ಥಿತಿ ಮತ್ತು ರಾಜಕೀಯ–ಸಾಮಾಜಿಕ ಬೆಳವಣಿಗೆಗಳು, ಬಾಂಗ್ಲಾದೇಶದ ಭಾಗವಹಿಸುವಿಕೆ ಕುರಿತು ಹಲವು ಪ್ರಶ್ನೆಗಳನ್ನು ಎಬ್ಬಿಸುತ್ತಿವೆ.

error: Content is protected !!