ಮಂಗಳೂರು: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಥಾನ. ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮೀಜಿ ಹಾಗೂ ಪರಮಪೂಜ್ಯ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಯವರ ದೈವಜ್ಞ ದರ್ಶನ ಕಾರ್ಯಕ್ರಮ ಜನವರಿ 7 ರಂದು ಬುಧವಾರ ಸಾಯಂಕಾಲ 6.00 ಗಂಟೆಗೆ ದೈವಜ್ಞ ಕಲ್ಯಾಣ ಮಂಟಪ, ಅಶೋಕನಗರ, ಮಂಗಳೂರಿನಲ್ಲಿ ನೆರವೇರಲಿದೆ.

ದೈವಜ್ಞ ಬ್ರಾಹ್ಮಣ ಸಮಾಜದ ಸರ್ವಾಂಗೀಣ ವಿಕಾಸ, ಸಮಾಜ ಸಂಘಟನೆ ಹಾಗೂ ಧಾರ್ಮಿಕ ಭಾವನೆಗಳ ಸಂವರ್ಧನೆಗಾಗಿ ನಾಲ್ಕು ದಶಕಗಳ ಹಿಂದೆ ಸ್ಥಾಪಿಸಲಾದ ದೈವಜ್ಞ ಶ್ರೀ ಮಠವು ತನ್ನ ಕಾರ್ಯ ವ್ಯಾಪ್ತಿಯಲ್ಲಿ ಕರ್ತವ್ಯಗಳನ್ನು ಪೂರೈಸುತ್ತಾ ಮುಂದುವರೆಯುತ್ತಿದ್ದು, ಇದೀಗ ದೇವರನ್ನು ತಿಳಿದು ದೈವಯಜ್ಞ ಮುಂತಾದವುಗಳನ್ನು ಆಚರಿಸುತ್ತಾ ದೈವಜ್ಞರೆಂದು ಖ್ಯಾತರಾದ ಸಮಾಜ ಬಾಂಧವರನ್ನು ಸಂದರ್ಶಿಸಲು ಹಾಗೂ ತಮ್ಮ ಉತ್ತರಾಧಿಕಾರಿಯಾದ ಶ್ರೀಗಳವರನ್ನು ಪರಿಚಯಿಸಲು ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರು ತತ್ ಕರಕಮಲ ಸಂಜಾತರಾದ ಪರಮಪೂಜ್ಯ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿಗಳವರೊಂದಿಗೆ “ದೈವಜ್ಞ ದರ್ಶನ” ಎಂಬ ಕಾರ್ಯ ನಿಮಿತ್ತ ಮಂಗಳೂರಿಗೆ ಚಿತ್ತೈಸಲಿರುವರು.

ಉಭಯ ಶ್ರೀಗಳು ಮಣ್ಣಗುಡ್ಡೆ ಗುರ್ಜಿ ಬಳಿಯಿಂದ ಸಂಜೆ 5.30ಕ್ಕೆ ಪೂರ್ಣಕುಂಭ ಸ್ವಾಗತ – ಮೆರವಣಿಗೆ ಮೂಲಕ ದೈವಜ್ಞ ಕಲ್ಯಾಣ ಮಂಟಪಕ್ಕೆ ಆಗಮಿಸಲಿರುವರು. ದೈವಜ್ಞ ಮಹಿಳಾ ಮಂಡಳಿಯವರಿಂದ ಚೆಂಡೆ ಹಾಗೂ ಭಜನೆ ಕುಣಿತ ಹಾಗೂ ಟ್ಯಾಬ್ಲೋ, ಮಂಗಳವಾದ್ಯದೊಂದಿಗೆ ಮೆರವಣಿಗೆ ಮೂಲಕ ದೈವಜ್ಞ ಕಲ್ಯಾಣ ಮಂಟಪಕ್ಕೆ ಆಗಮಿಸಿ ಗೌರವ ಸನ್ಮಾನ ಸ್ವೀಕರಿಸಿ, ಬಳಿಕ ಸಂಜೆ 6:30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಲಿರುವರು. ಇದೇ ವೇಳೆ ಗುರುವಂದನೆ, ಶ್ರೀಗಳವರಿಗೆ ಫಲಪುಷ್ಪ ಸಮರ್ಪಣೆ. ದಾನಿಗಳಿಗೆ ಗೌರವಾರ್ಪಣೆ ಹಾಗೂ ಶ್ರೀಗಳವರಿಗೆ ಸಮಾಜದ ವತಿಯಿಂದ ಪಾದೂಕಾ ಪೂಜೆ ನೆರವೇರಲಿದೆ ಎಂದು ದೈವಜ್ಞ ಬ್ರಾಹ್ಮಣರ ಸಂಘದ ಪ್ರಕಟಣೆ ತಿಳಿಸಿದೆ.
