ಮಂಗಳೂರು: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯದಲ್ಲಿ 40 ಸಾವಿರಕ್ಕೂ ಅಧಿಕ ಸರಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರಕಾರ ಮುಂದಾಗಿದೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಶನ್ (ಎಐಡಿಎಸ್ಓ) ಆರೋಪಿಸಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಂಘಟನೆಯ ಮಂಗಳೂರು ಸಂಚಾಲಕ ವಿನಯ್ ಚಂದ್ರ , ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ 800 ಶಾಲೆಗಳನ್ನು ಮುಚ್ಚಲು ಪಟ್ಟಿ ಮಾಡಲಾಗಿದೆ. ಇದು ಶೈಕ್ಷಣಿಕ ವಲಯಕ್ಕೆ ಗಂಭೀರ ಹೊಡೆತ ಎಂದು ಹೇಳಿದರು.
ಗ್ರಾ. ಪಂ.ಗೆ ಒಂದರಂತೆ ರಾಜ್ಯದಲ್ಲಿ 6 ಸಾವಿರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದು ಇಲಾಖೆ ತಿಳಿಸಿದೆ. ಪೈಲೆಟ್ ಪ್ರಾಜೆಕ್ಟ್ ಆಗಿ ಕೆಲವು ಜಿಲ್ಲೆಯ ಶಾಲೆಗಳ ವಿಲೀನಗೊಳಿಸಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಾಗಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದಕ್ಕೆ ಕೆಲವೆಡೆ ಸ್ಥಳೀಯರ ವಿರೋಧವೂ ವ್ಯಕ್ತವಾಗಿದೆ. ಮಕ್ಕಳಿದ್ದರೂ ಅಂತಹ ಶಾಲೆಗಳಿಗೆ ಮೂಲಸೌಕರ್ಯಗಳನ್ನು ನೀಡದ ಸರಕಾರ ಶಾಲೆಯನ್ನೇ ಮುಚ್ಚುತ್ತಿರುವುದು ಸರಿಯಲ್ಲ ಎಂದರು. ಸಂಘಟನೆಯ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಉಪಸ್ಥಿತರಿದ್ದರು.