ಮಂಗಳೂರು: ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಇಂದು(ಡಿ.25) ಮುಂಜಾನೆ ಮಂಗಳೂರಿನ ವೆಲೆನ್ಸಿಯಾ ಪ್ರದೇಶದಲ್ಲಿರುವ ರಿಟ್ರೀಟ್ ಹೌಸ್ ಸಮೀಪ ಸಂಭವಿಸಿದೆ.

ನಂದಿಗುಡ್ಡದಿಂದ ಕಂಕನಾಡಿ ಕಡೆಗೆ ತೆರಳುತ್ತಿದ್ದ ಕಾರು ಬೆಳಿಗ್ಗೆ ಸುಮಾರು 6.45ರ ವೇಳೆಗೆ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ರಸ್ತೆ ಮಧ್ಯೆ ಉರುಳಿಬಿದ್ದಿದೆ ಎಂದು ತಿಳಿದುಬಂದಿದೆ.

ಘಟನೆ ನಡೆದ ತಕ್ಷಣ ಸಾರ್ವಜನಿಕರು ಕಾರನ್ನು ಸರಿಯಾಗಿ ತಿರುಗಿಸಿ ನಿಲ್ಲಿಸಲು ಸಹಾಯ ಮಾಡಿದ್ದಾರೆ. ಕಾರಿನಲ್ಲಿ ಚಾಲಕ ಒಬ್ಬನೇ ಇದ್ದು, ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾನೆ.
ಅಪಘಾತದ ಬಳಿಕ ಚಾಲಕ ಸ್ಥಳದಿಂದ ಹೊರಟುಹೋಗಿದ್ದಾನೆ ಎನ್ನಲಾಗಿದೆ. 112 ತುರ್ತು ಸಹಾಯವಾಣಿಗೆ ಮಾಹಿತಿ ಬಂದ ಸುಮಾರು 15 ನಿಮಿಷಗಳಲ್ಲಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.