ಪಣಜಿ: ಗೋವಾ ನೈಟ್ಕ್ಲಬ್ನಲ್ಲಿ ಬೆಂಕಿ ಅವಘಡಕ್ಕೆ 25 ಮಂದಿ ಸಾವು ಪ್ರಕರಣದಲ್ಲಿ ಕ್ಲಬ್ನ ನಾಲ್ವರು ಮಾಲೀಕರ ಪೈಕಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅಜಯ್ ಗುಪ್ತಾನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ. ಲುಕ್ಔಟ್ ನೋಟಿಸ್ ಹೊರಡಿಸಿದ ಬಳಿಕ ಬಂಧಿಸಲಾಗಿದೆ. ಬೆನ್ನುಮೂಳೆಯ ಕಾಯಿಲೆಯಿಂದ ಬಳಲುತ್ತಿದ್ದ ಗುಪ್ತಾ ದೆಹಲಿಯ ಲಜಪತ್ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ಉತ್ತರ ಗೋವಾದಲ್ಲಿರುವ ‘ಬಿರ್ಚ್ ಬೈ ರೋಮಿಯೋ ಲೇನ್’ ಎಂಬ ನೈಟ್ಕ್ಲಬ್ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡದ ನಂತರ ಅಜಯ್ ಗುಪ್ತಾ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಸಹೋದರರಾದ ಸೌರಭ್ ಲೂಥ್ರಾ ಮತ್ತು ಗೌರವ್ ಲೂಥ್ರಾ ಅವರೊಂದಿಗೆ ಗುಪ್ತಾ ಕೂಡ ನೈಟ್ಕ್ಲಬ್ನ ಸಹ-ಮಾಲೀಕತ್ವ ಹೊಂದಿದ್ದಾರೆ. ಬೆಂಕಿ ಅವಘಡ ಬೆನ್ನಲ್ಲೇ ಲೂಥ್ರಾ ದಂಪತಿ ಥೈಲ್ಯಾಂಡ್ನ ಫುಕೆಟ್ಗೆ ಎಸ್ಕೇಪ್ ಆಗಿದ್ದಾರೆ. ಅವರನ್ನು ಮರಳಿ ಕರೆತರಲು ಪ್ರಯತ್ನಗಳು ನಡೆಯುತ್ತಿವೆ.

ಪೊಲೀಸರು ತನ್ನನ್ನು ಬಂಧಿಸುತ್ತಾರೆಂದು ಅಜಯ್ ಗುಪ್ತಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆನ್ನುಮೂಳೆಯ ಸಮಸ್ಯೆಯೆಂದು ಸ್ವತಃ ತಾನೇ ಆಸ್ಪತ್ರೆಗೆ ದಾಖಲಾಗಿದ್ದಾರೆ. 3-4 ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರುವುದು ಯೋಜನೆಯಾಗಿತ್ತು. ಈ ಅವಧಿಯಲ್ಲಿ ಬೇರೆ ಪ್ಲ್ಯಾನ್ ಮಾಡಿ ಬಂಧನದಿಂದ ಪಾರಾಗಲು ಯೋಜಿಸಿದ್ದರು.
ಈ ಪ್ರಕರಣದಲ್ಲಿ ಗೋವಾ ಪೊಲೀಸರಿಗೆ ಸಹಾಯ ಮಾಡುತ್ತಿರುವ ದೆಹಲಿ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು, ಗುಪ್ತಾ ಪ್ಲ್ಯಾನ್ ವಿಫಲಗೊಳಿಸಿದ್ದಾರೆ. ಗುಪ್ತಾ ಅವರನ್ನು ವಶಕ್ಕೆ ಪಡೆಯಲಾಗಿದೆ. ಗೋವಾಕ್ಕೆ ಕರೆದೊಯ್ಯುವ ಮೊದಲು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
