ಬೆಂಗಳೂರು: ನಗರದಲ್ಲಿ ನಕಲಿ ‘ನಂದಿನಿ’ ತುಪ್ಪ ತಯಾರಿಕೆ ಮತ್ತು ವಿತರಣೆ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದು, ಕಿಂಗ್ಪಿನ್ ದಂಪತಿ ಶಿವಕುಮಾರ್ ಮತ್ತು ರಮ್ಯಾ ಎಂಬವರನ್ನು ಬಂಧಿಸಿದ್ದಾರೆ.

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್)ದ ‘ನಂದಿನಿ’ ಬ್ರ್ಯಾಂಡ್ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವಂತೆ ಬಿಂಬಿಸಿ ದಂಪತಿ ನಕಲಿ ತುಪ್ಪವನ್ನು ತಯಾರಿಸಿ ಮಾರುಕಟ್ಟೆಗೆ ಪೂರೈಸುತ್ತಿದ್ದರೆಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿಸಿಬಿ ದಾಳಿ ವೇಳೆ ಕಲಬೆರಕೆ ತುಪ್ಪ ತಯಾರಿಸಲು ಬಳಸುತ್ತಿದ್ದ ಅತ್ಯಾಧುನಿಕ ಯಂತ್ರೋಪಕರಣಗಳು, ಮಿಶ್ರಣಕ್ಕೆ ಬಳಸಿದ ತೆಂಗಿನ ಮತ್ತು ತಾಳೆ ಎಣ್ಣೆ, ಹಾಗೂ ವಿವಿಧ ಸಾಮಗ್ರಿಗಳು ಪತ್ತೆಯಾಗಿವೆ.

ಆರೋಪಿಗಳು ದೊಡ್ಡ ಪ್ರಮಾಣದಲ್ಲಿ ನಕಲಿ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿದ್ದರು. ರಹಸ್ಯ ಮಾಹಿತಿಯ ಆಧಾರದ ಮೇಲೆ ನವೆಂಬರ್ 14 ರಂದು ಸಿಸಿಬಿ ವಿಶೇಷ ದಳ ಮತ್ತು ಕೆಎಂಎಫ್ ವಿಜಿಲೆನ್ಸ್ ತಂಡ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ, ಚಾಮರಾಜಪೇಟೆ–ನಂಜಾಂಬ ಅಗ್ರಹಾರದಲ್ಲಿರುವ ‘ಕೃಷ್ಣ ಎಂಟರ್ಪ್ರೈಸಸ್’ಗೆ ಸೇರಿದ ಗೋದಾಮು, ಅಂಗಡಿಗಳು ಮತ್ತು ವಾಹನಗಳ ಮೇಲೆ ದಾಳಿ ನಡೆದಿದೆ.

ಕಾರ್ಯಾಚರಣೆಯಲ್ಲಿ ತಮಿಳುನಾಡಿನಿಂದ ತರಲಾಗುತ್ತಿದ್ದ ಕಲಬೆರಕೆ ತುಪ್ಪದ ಸರಕು ವಾಹನವನ್ನೂ ತಡೆದು ವಶಪಡಿಸಿಕೊಳ್ಳಲಾಗಿದೆ.
ಒಟ್ಟಾರೆ ₹1.26 ಕೋಟಿಗಳ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರಲ್ಲಿ— 8,136 ಲೀಟರ್ ನಕಲಿ ತುಪ್ಪ (₹56.95 ಲಕ್ಷ), ತಯಾರಿಕಾ ಯಂತ್ರೋಪಕರಣಗಳು, ಐದು ಮೊಬೈಲ್ ಫೋನ್ಗಳು, ₹1.19 ಲಕ್ಷ ನಗದು ಹಾಗೂ ₹60 ಲಕ್ಷ ಮೌಲ್ಯದ ನಾಲ್ಕು ಬೊಲೆರೊ ಸರಕು ವಾಹನಗಳು ಸೇರಿವೆ.

ತಯಾರಿಸಿದ ನಕಲಿ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬೆರೆಸಲಾಗಿದೆಯೇ? ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳು ಮಾದರಿ ಪರೀಕ್ಷೆ ನಡೆಸುತ್ತಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಮಹೇಂದ್ರ, ದೀಪಕ್, ಮುನಿರಾಜ್ ಮತ್ತು ಅಭಿಯರಸು ಎಂದು ಗುರುತಿಸಲಾಗಿದೆ.