ಬೆಂಗಳೂರು: ಚನ್ನಪಟ್ಟಣ ನಗರದ ಜೀವನ್ ಪುರ ನಗರದಲ್ಲಿ ನೀರಿನ ಟಬ್ ಗೆ ಬಿದ್ದು 11 ತಿಂಗಳ ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೃತ ಬಾಲಕಿಯನ್ನು ಖುಷಿ ಎಂದು ಗುರುತಿಸಲಾಗಿದೆ.
ಚನ್ನಪಟ್ಟಣದಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಶಂಷಾದ್ ಕೆಲಸ ಮುಗಿಸಿಕೊಂಡು ಮನೆಗೆ ಬಂದ ನಂತರ ತೀವ್ರ ಬಾಯಾರಿಕೆಯಿಂದ ಪತ್ನಿ ಮುಸ್ಕಾನ್ ಅವರ ಬಳಿ ಕುಡಿಯಲು ನೀರು ಕೇಳಿದ್ದರು. ಪತಿಗಾಗಿ ನೀರು ತರಲು ಮುಸ್ಕಾನ್ ಅಡುಗೆ ಮನೆಗೆ ತೆರಳಿದ್ದಾಗ, ಮನೆಯೊಳಗೆ ಆಟವಾಡುತ್ತಿದ್ದ ಮಗು ಖುಷಿ ಟಬ್ನಲ್ಲಿದ್ದ ನೀರಿನೊಳಗೆ ಬಿದ್ದಿದೆ. ಈ ವೇಳೆ ಮಗು ಪ್ರಜ್ಞೆ ತಪ್ಪಿದ್ದು ಇದನ್ನು ಗಮನಿಸಿದ ಪೋಷಕರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಮಗುವನ್ನು ಕರೆದೊಯ್ದಿದ್ದಾರೆ.
ತಪಾಸಣೆ ನಡೆಸಿದ ವೈದ್ಯರು ಮಗು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಚನ್ನಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
