ಕಾಸರಗೋಡು: ಕುಂಬಳೆ ಸಮೀಪದ ನಾರಾಯಣಮಂಗಲ ಎಂಬಲ್ಲಿ ಯುವಕನೋರ್ವ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಭಾನುವಾರ(ಅ.19) ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ರಕ್ಷಿಸಲು ಬಾವಿಗೆ ಹಾರಿದ ಸಹೋದರನನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದರು.
ನಾರಾಯಣ ಮಂಗಲದ ನಿವಾಸಿ ವಿವೇಕ್ ಶೆಟ್ಟಿ (28) ಬಾವಿಗೆ ಬಿದ್ದು ಮೃತಪಟ್ಟ ವ್ಯಕ್ತಿ.
ವಿವೇಕ್ ಬಾವಿಗೆ ಬೀಳುತ್ತಿರುವುದನ್ನು ಗಮನಿಸಿದ ಸಹೋದರ ತೇಜಸ್ ಬಾವಿಗೆ ಹಾರಿ ಬಾವಿಯಲ್ಲಿ ಸಿಲುಕಿಕೊಂಡಿದ್ದಾರೆ. ಸ್ಥಳೀಯರು ಹಾಗೂ ಮನೆಯವರು ಇಬ್ಬರನ್ನು ಮೇಲಕ್ಕೆತ್ತಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಾಹಿತಿ ತಿಳಿದು ಉಪ್ಪಳದಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಬ್ಬರನ್ನು ಮೇಲಕ್ಕೆತ್ತಿದ್ದಾರೆ.

ವಿವೇಕ್ ನನ್ನು ಕುಂಬಳೆಯ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.
ಮೃತರು ಕಾಸರಗೋಡು ಲೀಗಲ್ ಮೆಟ್ರಾಲಜಿ ಇಲಾಖೆಯ ಸೀನಿಯರ್ ಕ್ಲರ್ಕ್ ಹುದ್ದೆಯಲ್ಲಿದ್ದರು. ನಾಲ್ಕು ವರ್ಷಗಳ ಹಿಂದೆ ಆಶ್ರಿತ ನಿಯಮಾನುಸಾರ ಇವರಿಗೆ ಸರ್ಕಾರಿ ಉದ್ಯೋಗ ದೊರೆತಿದ್ದು, ಕೆಲ ಸಮಯದಿಂದ ಉದ್ಯೋಗಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.