ಹುಬ್ಬಳ್ಳಿ: ಆರ್ಎಸ್ಎಸ್ ಎದುರು ಹಾಕಿಕೊಂಡವರು ಭಸ್ಮವಾಗುತ್ತಾರೆ, ಇದು ಕಾಂಗ್ರೆಸ್ ಅಂತ್ಯದ ಆರಂಭ ಎಂದು ಇಂದು (ಅ.20) ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯನವರು ಖರ್ಗೆ ತಾಳಕ್ಕೆ ತಕ್ಕಂತೆ ಕುಣಿತಿದ್ದಾರೆ. ಸಿದ್ದರಾಮಯ್ಯ ಆ್ಯಂಡ್ ಕಂಪನಿ ಹಿಂದೂ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಇತ್ತೀಚೆಗೆ ಸಿಎಂ ಆಡಳಿತದಲ್ಲಿ ಬಿಗಿ ಕಳೆದುಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆ, ಆರ್ಥಿಕತೆ ಕುಸಿದಿದೆ, ಭ್ರಷ್ಟಾಚಾರ ಮಿತಿ ಮೀರಿದೆ ಎಂದು ಹೇಳಿದರು.
ಗುತ್ತಿಗೆದಾರರ ಆರೋಪಕ್ಕೆ ಕೋರ್ಟ್ಗೆ ಹೋಗಲಿ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಪ್ರಿಯಾಂಕ್ ಖರ್ಗೆ ತಮ್ಮ ಇಲಾಖೆ ಬಗ್ಗೆ ಕಾಳಜಿ ವಹಿಸುವುದನ್ನು ಬಿಟ್ಟು ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಾರೆ. ಇವರಿಗೆ ಈ ಬಗ್ಗೆ ಮಾತನಾಡುವುದಕ್ಕೆ ನೈತಿಕತೆ ಇಲ್ಲ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಆರ್ಎಸ್ಎಸ್ ನಿಷೇಧದ ಬಗ್ಗೆ ಪತ್ರ ಬರೆದಿದ್ದಾರೆ. ಸಿದ್ದರಾಮಯ್ಯ ಏನು ಕ್ರಮ ಕೈಗೊಂಡಿದ್ದಾರೆ? ಜಗದೀಶ ಶೆಟ್ಟರ ಸಿಎಂ ಇದ್ದಾಗ ಮಾಡಿದ ಆದೇಶ ಮುಂದುವರೆಸಿದ್ದೇವೆ ಎಂದಿದ್ದಾರೆ. ಅದು ಶಿಕ್ಷಣ ಇಲಾಖೆಗೆ ಸ್ಪಷ್ಟೀಕರಣ ಕೊಟ್ಟ ಪತ್ರ. ಶೈಕ್ಷಣಿಕ ಚಟುವಟಿಕೆ ಬಿಟ್ಟು ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಬಗ್ಗೆಯದ್ದು. ಇದು ಬ್ಯಾನ್ ಅಲ್ಲ, ಸೂಚನೆ ನೀಡಿದ್ದು. ಅದರಲ್ಲಿ ಆರ್ಎಸ್ಎಸ್ ನಿಷೇಧದ ಬಗ್ಗೆ ಏನಾದರೂ ಇದೇಯಾ? ಇವರು ಮೂರ್ಖರಿದ್ದಾರೆ. ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಸುಮ್ಮನೆ ಅಪಪ್ರಚಾರ ಮಾಡುತ್ತಿದ್ದಾರೆ. ಆವಾಗಿನ ನಿರ್ಧಾರ ಕ್ಯಾಬಿನೆಟ್ ನಿರ್ಧಾರ ಅಲ್ಲ. 2013ರಲ್ಲಿ ಎಲ್ಲೂ ಉಲ್ಲೇಖ ಬರಲಿಲ್ಲ. ಈಗ ಏಕಾಏಕಿ ನೆನಪಾಗಿದೆ. ತಮ್ಮ ತಪ್ಪುಗಳನ್ನು ಮುಚ್ಚಲು ಹೀಗೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎರಡನೇ ಪತ್ರ ಬರೆದಿದ್ದಾರೆ. ಇದರ ಬಗ್ಗೆ ಸುತ್ತೋಲೆ ಹೊರಡಿಸಿದ್ದೀರಾ? ಆರ್ಡರ್ ಮಾಡದೆಯೇ ಲಿಂಗಸೂರನಲ್ಲಿ ಪಿಡಿಒ ಸಸ್ಪೆಂಡ್ ಮಾಡಿದ್ದಾರೆ. ಕಾನೂನು ಬಗ್ಗೆ ಸಿದ್ದರಾಮಯ್ಯ ಅವರಿಗೆ ಜ್ಞಾನವೇ ಇಲ್ಲ. ಕೇಂದ್ರ ಸರ್ಕಾರದ ಆದೇಶದ ಬಗ್ಗೆ ನಿಮಗೆ ಅರಿವಿದೆಯಾ? ಕೇಂದ್ರ ಸರಕಾರ 2024ರಲ್ಲಿ ಆರ್ಎಸ್ಎಸ್ನಲ್ಲಿ ಭಾಗಿಯಾಗಬಾರದೆಂಬ ನಿಷೇಧ ಹಿಂಪಡೆದಿದ್ದಾರೆ. ದೇಶ ಪ್ರೇಮಿ ಸಂಘಟನೆ ಅವಹೇಳನ ಮಾಡುತ್ತಿರುವುದನ್ನು ನಿಲ್ಲಿಸಿ. ನಿಮಗೆ ಧೈರ್ಯ ಇದ್ದರೆ ಆರ್ಎಸ್ಎಸ್ ಹೆಸರು ತೆಗೆದು ಹಾಕಿ. ಸಂಘ ಈಗ ಪ್ರಪಂಚದಲ್ಲೇ ಬೆಳೆಯುತ್ತಿದೆ. ಆರ್ಎಸ್ಎಸ್ ಬಗ್ಗೆ ಮಾತನಾಡಿದಾಗ ನಾವು ಮಾತನಾಡುತ್ತೇವೆ. ನಾನು ಕೂಡ ಸಂಘ ಪರಿವಾರದಿಂದ ಬಂದವನು ಎಂದರು.