ಕರ್ನಾಟಕದಲ್ಲಿ ಮುಖ್ಯ ಮಂತ್ರಿ ಬದಲಾವಣೆ ಕುರಿತು ಡಿಕೆಶಿ ಮಹತ್ವದ ಹೇಳಿಕೆ: ಸಿದ್ದುಗೆ ಟಾಂಗ್?

ಬೆಂಗಳೂರು / ದೆಹಲಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತಂತೆ ಗಾಢ ಚರ್ಚೆಗಳ ನಡುವೆ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಕಾಂಗ್ರೆಸ್ ನಾಯಕರು ಯಾರೂ ಕೂಡಾ ಮುಖ್ಯಮಂತ್ರಿ ಹುದ್ದೆಯ ಹಂಚಿಕೆ ಕುರಿತಂತೆ ಅನಗತ್ಯವಾಗಿ ಮಾತನಾಡಬಾರದು ಎಂದು ಎಚ್ಚರಿಸಿದರು. ಡಿಕೆ ಶಿವಕುಮಾರ್ ಅವರಿಗೆ ಭವಿಷ್ಯದ ಮುಖ್ಯಮಂತ್ರಿಯಾಗಿ ಬೆಂಬಲ ವ್ಯಕ್ತಪಡಿಸಿರುವ ಕುಣಿಗಲ್‌ ಶಾಸಕ ಎಚ್‌ಡಿ ರಂಗನಾಥ್ ಅವರ ಹೇಳಿಕೆಗೆ ಉತ್ತರವಾಗಿ ಡಿಕೆಶಿ ಈ ರೀತಿ ಹೇಳಿದ್ದಾರೆ.

“ಮುಖ್ಯಮಂತ್ರಿ ಹುದ್ದೆ ಹಂಚಿಕೆಯ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ನಾನು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ. ನಾವು ಹೈಕಮಾಂಡ್‌ನ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ.” ಎಂದು ಡಿಕೆಶಿ ಹೇಳಿದರು.

ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯಾಧ್ಯಕ್ಷ ಜಿಸಿ ಚಂದ್ರಶೇಖರ್ ಅವರಿಗೆ ಸೂಚನೆ ನೀಡಿ, ಈ ವಿಷಯದಲ್ಲಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಡಿಕೆಶಿ ಸೂಚಿಸಿದ್ದಾರೆ. “ಬಿಜೆಪಿ ಏನು ಬೇಕಾದರೂ ಹೇಳಲಿ ನಾವು ಪ್ರತಿಕ್ರಿಯಿಸುವ ಅಗತ್ಯವಿಲ್ಲ. ನಮ್ಮವರು ಮಾತ್ರ ಸಿಎಂ ಹುದ್ದೆಗೆ ಸಂಬಂಧಿಸಿದಂತೆ ಯಾರೂ ಏನನ್ನೂ ಹೇಳಬಾರದು.” ಎಂದರು.

ಇತ್ತೀಚೆಗೆ, ಕುಣಿಗಲ್ ಕಾಂಗ್ರೆಸ್ ಶಾಸಕ ಎಚ್‌ಡಿ ರಂಗನಾಥ್ ತಮ್ಮ “ರಾಜಕೀಯ ಗುರು” ಡಿಕೆ ಶಿವಕುಮಾರ್ ಅವರು ಒಂದು ದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಆಶಯವನ್ನು ವ್ಯಕ್ತಪಡಿಸಿ, ಅವರನ್ನು “ಉದಯೋನ್ಮುಖ ತಾರೆ” ಮತ್ತು “ಭಾರದ ನಾಯಕ” ಎಂದೆಲ್ಲಾ ಕೊಂಡಾಡಿದ್ದರು. “ಡಿಕೆಶಿ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಬಹುಮುಖ್ಯ ಪಾತ್ರ ವಹಿಸಿದ್ದಾರೆ. ಪಕ್ಷಕ್ಕೆ ಅವರು ತೋರಿದ ಬದ್ಧತೆ ವಿಭಿನ್ನವಾಗಿದೆ.” ಎಂದು ಎಚ್‌ಡಿ ರಂಗನಾಥ್ ಹೇಳಿದ್ದರು.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ತಮ್ಮ ಹಿಂದಿನ ನಿಲುವನ್ನು ಪುನರುಚ್ಚರಿಸಿ, “ನಾನು ಐದು ವರ್ಷಗಳ ಅವಧಿಗೆ ಪೂರ್ಣ ಮುಖ್ಯಮಂತ್ರಿಯಾಗಿರುತ್ತೇನೆ.” ಎಂದು ಹೇಳಿದ್ದರು. ಕಳೆದ ವರ್ಷದ ಚುನಾವಣಾ ಜಯದ ನಂತರ, ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನೇಮಕ ಮಾಡಲಾಯಿತು. ಆ ವೇಳೆ ವರದಿಗಳು ಶಿವಕುಮಾರ್ ಅವರೊಂದಿಗೆ ಪರ್ಯಾಯ ಮುಖ್ಯಮಂತ್ರಿಯಾಗಿ ಅಧಿಕಾರ ಹಂಚಿಕೆ ಸಾಧ್ಯತೆಯನ್ನು ಸೂಚಿಸುತ್ತಿದ್ದರೂ, ಕಾಂಗ್ರೆಸ್ ಹೈಕಮಾಂಡ್ ಅದನ್ನು ದೃಢಪಡಿಸಿಲ್ಲ. ಇತ್ತೀಚೆಗೆ, ಸಿದ್ದರಾಮಯ್ಯ ಮತ್ತು ಹಿರಿಯ ನಾಯಕರು ಅಂತಹ ಒಪ್ಪಂದದ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಖುರ್ಚಿ ಫೈಟಿಂಗ್ ರಾಜಕೀಯ ಚರ್ಚೆಗಳು ಮತ್ತಷ್ಟು ತೀವ್ರವಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

error: Content is protected !!