ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಕುರುಹಾಗಿ ಪ್ರಧಾನಿ ನರೇಂದ್ರ ಮೋದಿ ಅವರು ₹100 ಮುಖಬೆಲೆಯ ನಾಣ್ಯ ಹಾಗೂ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಬುಧವಾರ ಮಾಡಿದ್ದಾರೆ. ₹100 ನಾಣ್ಯದಲ್ಲಿ ಭಾರತ್ ಮಾತೆ ಹಾಗೂ ಸ್ವಯಂಸೇವಕರ ಚಿತ್ರ ಇರುವುದು ವಿಶೇಷ. ಭಾರತೀಯ ಕರೆನ್ಸಿಯೊಂದರಲ್ಲಿ ಭಾರತ ಮಾತೆಯ ಚಿತ್ರ ಹಾಕಲಾಗಿರುವುದು ಇದೇ ಮೊದಲು.

ಈ ವಿಶೇಷ 100 ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನದ ಚಿತ್ರ ಇದೆ. ಮತ್ತೊಂದು ಬದಿಯಲ್ಲಿ ಸಿಂಹ ಸಮೇತ ವರದ ಮುದ್ರಾದಲ್ಲಿರುವ ಭಾರತ್ ಮಾತೆ, ಹಾಗೂ ಆಕೆಗೆ ಆರೆಸ್ಸೆಸ್ ಸ್ವಯಂಸೇವಕರು ವಂದಿಸುತ್ತಿರುವ ಚಿತ್ರ ಇದೆ. ‘ಸ್ವತಂತ್ರ ಭಾರತದ ಇತಿಹಾಸದಲ್ಲಿ ಭಾರತೀಯ ಕರೆನ್ಸಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ ಮುದ್ರಿಸಲಾಗಿದೆ. ಈ ಕರೆನ್ಸಿಗೆ ಐತಿಹಾಸಿಕ ಮಹತ್ವ ಇದೆ. ಇದು ಹೆಮ್ಮೆಯ ಕ್ಷಣ’ ಎಂದು ನರೇಂದ್ರ ಮೋದಿ ಅವರು ನಾಣ್ಯ ಹಾಗೂ ಪೋಸ್ಟಲ್ ಸ್ಟ್ಯಾಂಪ್ ಅನಾವರಣಗೊಳಿಸಿ ಹೇಳಿದ್ದಾರೆ.
ಆರೆಸ್ಸೆಸ್ 1925ರಲ್ಲಿ ಮಹಾರಾಷ್ಟ್ರದ ನಾಗಪುರ್ನಲ್ಲಿ ಸ್ಥಾಪನೆಯಾಗಿದೆ. ಈ ವರ್ಷಕ್ಕೆ ಈ ಸಂಘಟನೆ 100 ವರ್ಷ ಪೂರೈಸಿದಂತಾಗುತ್ತದೆ. ಹೀಗಾಗಿ, ಈ ವರ್ಷ ಆರೆಸ್ಸೆಸ್ ಶತಮಾನೋತ್ಸವ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾಣ್ಯ ಮತ್ತು ಸ್ಟ್ಯಾಂಪ್ ಬಿಡುಗಡೆ ಮಾಡಲಾಗಿದೆ. ಈ ನಾಣ್ಯದಲ್ಲಿ ಭಾರತ್ ಮಾತೆ ಮತ್ತು ಸ್ವಯಂ ಸೇವಕರ ಚಿತ್ರದ ಜೊತೆಗೆ ಆರೆಸ್ಸೆಸ್ನ ಧ್ಯೇಯ ವಾಕ್ಯವೂ ಇದೆ. ‘ರಾಷ್ಟ್ರಾಯ ಸ್ವಾಹ, ಇದಂ ರಾಷ್ಟ್ರಾಯ, ಇದಂ ನಾ ಮಮ’ ಎನ್ನುವ ಸಂಸ್ಕೃತ ಶ್ಲೋಕ ಅದು. ಅದರರ್ಥ, ಪ್ರತಿಯೊಂದೂ ಕೂಡ ದೇಶಕ್ಕೆ ಸಮರ್ಪಿತ. ಎಲ್ಲವೂ ಕೂಡ ದೇಶಕ್ಕೆ ಸೇರಿದ್ದು, ನನ್ನದೆನ್ನುವುದು ಯಾವುದೂ ಇಲ್ಲ.

ಈ ವೇಳೆ ಬಿಡುಗಡೆಯಾದ ವಿಶೇಷ ಅಂಚೆ ಚೀಟಿಯೂ ಕೂಡ ಆರೆಸ್ಸೆಸ್ ಮಹತ್ವವನ್ನು ಪ್ರತಿಬಿಂಬಿಸುತ್ತಿದೆ. 1963ರ ಗಣರಾಜ್ಯೋತ್ಸವದಲ್ಲಿ ಆರೆಸ್ಸೆಸ್ ಪಥ ಸಂಚಲನದ ಚಿತ್ರವು ಈ ಪೋಸ್ಟಲ್ ಸ್ಟ್ಯಾಂಪ್ನಲ್ಲಿದೆ.
ದೆಹಲಿಯ ಅಂಬೇಡ್ಕರ್ ಇಂಟರ್ನ್ಯಾಷನಲ್ ಸೆಂಟರ್ನಲ್ಲಿ ಬುಧವಾರ ನಡೆದ ಆರೆಸ್ಸೆಸ್ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಮೊದಲಾದವರು ಭಾಗವಹಿಸಿದ್ದರು.
