ಮಂಗಳೂರು: ಯುವತಿಯ ಅತ್ಯಾಚಾರಕ್ಕೆ ಯತ್ನಿಸಿ ಆಕೆಯ ನಗ್ನ ಫೊಟೊಗಳನ್ನು ಇರಿಸಿಕೊಂಡು ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ ಕೊಲೆ ಬೆದರಿಕೆ ಹಾಕಿರುವ ಕುರಿತು ಹಿಂದೂ ಜಾಗರಣ ವೇದಿಕೆಯ ಮುಖಂಡ ಸಮಿತ್ ರಾಜ್ ಧರೆಗುಡ್ಡೆ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ದೂರಿನಂತೆ ಪೊಲೀಸರು ಆರೋಪಿ ವಿರುದ್ಧ ಕ್ರಮ ಜರುಗಿಸಿದ್ದಾರೆ.
ತನ್ನನ್ನು ಬೆದರಿಸಿ ಅತ್ಯಾಚಾರಕ್ಕೆ ಯತ್ನಿಸಿದಲ್ಲದೇ ಮೇಲೆ ನಿರಂತರ ಲೈಂಗಿಕ ದೌರ್ಜನ್ಯವೆಸಗಿ ಫೊಟೊ ಇರುವುದಾಗಿ ಬೆದರಿಸುತ್ತಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.
ಸಂತ್ರಸ್ತೆಯ ಸಹೋದರನಿಗೆ 2 ವರ್ಷದ ಹಿಂದೆ ಬಜ್ಪೆಯಲ್ಲಿ ಅಪಘಾತವಾಗಿ ಮಂಗಳೂರಿನ ವಿನಯ್ ಆಸ್ಪತ್ರೆಯಲ್ಲಿದ್ದ ಸಂದರ್ಭ ಸಂತ್ರಸ್ತೆಯ ಮನೆಯ ಆರ್ಥಿಕ ಪರಿಸ್ಥಿತಿ ಮತ್ತು ಮನೆಯ ಪರಿಸ್ಥಿತಿಯನ್ನು ಆಸ್ಪತ್ರೆಗೆ ಬಂದಿದ್ದ ಓರ್ವ ವ್ಯಕ್ತಿ ಹಿಂಜಾವೇ ಮುಖಂಡ ಧರೆಗುಡ್ಡೆಯ ಸಮಿತ್ ರಾಜ್ ಎಂಬಾತನ ಮೊಬೈಲ್ ನಂಬರ್ ಕೊಟ್ಟು ಮಾತನಾಡಲು ಹೇಳಿದ್ದರು. ಅದರಂತೆ ಸಂತ್ರಸ್ತೆ ಆತನಿಗೆ ಫೋನ್ ಮಾಡಿ ಕಷ್ಟವನ್ನು ಹೇಳಿಕೊಂಡಿದ್ದಳು. ಬಳಿಕ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಆಸ್ಪತ್ರೆಗೆ ಬಂದು ಸಹಾಯ ಮಾಡಿದ್ದರು ಎಂದು ತಿಳಿದು ಬಂದಿದೆ.
ನಂತರ ಆರೋಪಿ ಸಮಿತ್ ರಾಜ್ ಪದೇ ಪದೇ ಸಂತ್ರಸ್ತೆಯ ಮೊಬೈಲ್ ಫೋನ್ ಗೆ ಕರೆ ಮಾಡಿ ಒಳ್ಳೆಯ ರೀತಿಯಲ್ಲಿ ಮಾತನಾಡಿ ನಂತರ ಯುವತಿಯನ್ನು ಪ್ರೀತಿ ಮಾಡುತ್ತಿದ್ದು ಮದುವೆಯಾಗುವುದಾಗಿ ಹೇಳಿದ್ದ. ಇದರಿಂದ ಹೆದರಿದ ಯುವತಿ ಮನೆಯಲ್ಲಿ ಮಾತನಾಡುವಂತೆ ತಿಳಿಸಿದ್ದಳು ಎಂದು ಹೇಳಲಾಗಿದೆ. ಆರೋಪಿ ಸಮಿತ್ ರಾಜ್ ನೊಂದಿಗೆ ಮಾತನಾಡಿದ್ದ ಆಕೆಯ ತಾಯಿ ಇಷ್ಟು ಸಣ್ಣ ವಯಸ್ಸಿಗೆ ಮದುವೆ ಮಾಡಿಸುವುದಿಲ್ಲ ಎಂದು ಹೇಳಿದ್ದರು ಎನ್ನಲಾಗಿದೆ.
ಆರೋಪಿಯು ಯುವತಿಗೆ ನಿರಂತರ ಫೊನ್ಕರೆಗಳನ್ನು ಮಾಡುತ್ತಿದ್ದು, ಕರೆ ಸ್ವೀಕರಿಸದಿದ್ದಾಗ ಕಾಲೇಜಿನ ಬಳಿ ಮತ್ತು ಮನೆ ಬಳಿ ಬರುವುದಾಗಿ ಬೆದರಿಸುತ್ತಿದ್ದ. ಹೀಗಾಗಿ ಆತನ ಒತ್ತಡಕ್ಕೆ ಮಣಿದು ಆತನೊಂದಿಗೆ ಇಷ್ಟ ಇಲ್ಲದಿದ್ದರೂ ಮಾತನಾಡುತ್ತಿದ್ದೆ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾಳೆ.
2023ರ ಮಾರ್ಚ್ 23ರಂದು ಕಾಲೇಜು ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಆರೋಪಿಯು ಕಾರಿನಲ್ಲಿ ಬಂದು ಆಕೆಯನ್ನು ಕರೆದೊಯ್ದು, ಬಜ್ಪೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಬಲಾತ್ಕಾರವಾಗಿ ಬಟ್ಟೆ ಬಿಚ್ಚಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂದರ್ಭ ಜೋರಾಗಿ ಬೊಬ್ಬೆ ಹೊಡೆದಾಗ ಬಾಯಿಗೆ ಕೈ ಅಡ್ಡ ಇಟ್ಟು ಈ ವಿಚಾರ ಯಾರಲ್ಲಾದರೂ ಹೇಳಿದರೆ ಮನೆಗೆ ಬಂದು ನನ್ನನ್ನು ಮತ್ತು ನನ್ನ ಮನೆಯವರನ್ನು ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಆ ಬಳಿಕ ಯುವತಿಯನ್ನು ಹಲವು ಬಾರಿ ಆತ ಹೊರಗಡೆ ಕರೆದೊಯ್ದು ಹೋಗಲು ಒಪ್ಪದೇ ಇದ್ದಾಗ ನನ್ನ ಆಶ್ಲೀಲ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದ. ಅಲ್ಲದೆ, ನನ್ನ ನಗ್ನ ಫೊಟೊಗಳನ್ನೂ ಕಳುಹಿಸುವಂತೆ ಒತ್ತಾಯಿಸಿದ ಕಾರಣ ಯುವತಿ ನಗ್ನ ಫೊಟೊಗಳನ್ನೂ ಕಳುಹಿಸಿದ್ದೆ ಎಂದು ಸಂತ್ರಸ್ತೆ ಯುವತಿ ದೂರಿನಲ್ಲಿ ಮಾಹಿತಿ ನೀಡಿದ್ದಾಳೆ.
ಸಮಿತ್ ರಾಜ್ ಧರೆಗುಡ್ಡೆ ಮೇಲೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲೂ ಯುವತಿಯರ ಅಶ್ಲೀಲ ಫೋಟೋ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವಿಚಾರಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ.