ಭೋಪಾಲ್: ಮಾನಸಿಕ ಅಸ್ವಸ್ಥ ಎಂದು ಹೇಳಲಾದ ವ್ಯಕ್ತಿಯೊಬ್ಬ ಏಕಾಏಕಿ ಮನೆಗೆ ನುಗ್ಗಿ ತಾಯಿ ಎದುರಲ್ಲೇ 5 ವರ್ಷದ ಮಗುವಿನ ಶಿರಚ್ಛೇದ ಮಾಡಿರುವ ಹೃದಯ ವಿದ್ರಾಹಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ವಿಕಾಸ್(5) ಮೃತ ಮಗು. ಮಹೇಶ್ (25) ಹತ್ಯೆ ಮಾಡಿದ ಆರೋಪಿ.
ಕೊಲೆಗಾರನನ್ನ ಇದುವರೆಗೆ ಆ ಕುಟುಂಬಸ್ಥರು ನೋಡಿದ್ದೇ ಇಲ್ಲ. ಏಕಾಏಕಿ ಬೈಕ್ನಲ್ಲಿ ಬಂದು ಮನೆಯೊಳಕ್ಕೆ ನುಗ್ಗಿದವನು, ಸಲಾಕೆ ತೆಗದುಕೊಂಡು ಮಗುವಿನ ತಲೆಗೆ ರಪ್ಪನೆ ಬಡಿದಿದ್ದಾನೆ, ಅಷ್ಟಕ್ಕೆ ಸುಮ್ಮನಾಗದೇ ಮಗುವಿನ ಗುತ್ತಿಗೆ ಹಿಡಿದು ತಲೆಯನ್ನ ಕತ್ತರಿಸಿದ್ದಾನೆ. ಮಗುವಿನ ಮೇಲೆ ಹಲ್ಲೆ ತಡೆಯಲು ಬಂದ ಪೋಷಕರ ಮೇಲೂ ಆರೋಪಿ ಹಲ್ಲೆ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಳಿಕ ಪೋಷಕರ ಚೀರಾಟ ಕೇಳಿ ಅಕ್ಕಪಕ್ಕದವರು ಮನೆಯೊಳಗೆ ಧಾವಿಸಿದ್ದಾರೆ. ಕೃತ್ಯ ಕಂಡು ಗ್ರಾಮಸ್ಥರು ಆರೋಪಿಯನ್ನ ಚೆನ್ನಾಗಿ ಥಳಿಸಿ, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಥಳಿತದಿಂದ ಗಂಭೀರವಾಗಿದ್ದ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾನೆ.
ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆತ ಮಾನಸಿಕ ಅಸ್ವಸ್ಥನೆಂದು ತಿಳಿದುಬಂದಿದೆ ಎಂದು ಧಾರ್ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.