ಬೆಂಗಳೂರು: ಪತ್ನಿಯ ಮೇಲೆ ಅನುಮಾನಗೊಂಡು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಪತ್ನಿಯನ್ನು ಭೀಕರವಾಗಿ ಹತ್ಯೆಗೈದಿದ್ದ ಪತಿ ಸೋಮವಾರ(ಸೆ.22) ತಡರಾತ್ರಿ 12 ಗಂಟೆ ಸುಮಾರಿಗೆ ಕಾಮಾಕ್ಷಿಪಾಳ್ಯ ಠಾಣೆಗೆ ಬಂದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಕೆಬ್ಬೆಹಳ್ಳ ನಿವಾಸಿ ಲೋಹಿ ತಾಶ್ವ (35) ಶರಣಾದ ಆರೋಪಿ.
ಆರೋಪಿ ಕೃತ್ಯ ಎಸಗಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಇತ್ತ ಆರೋಪಿಗಾಗಿ ಎರಡು ವಿಶೇಷ ತಂಡ ಕಾರ್ಯಾಚರಣೆ ನಡೆಸುತ್ತಿತ್ತು. ಅದನ್ನು ಅರಿತ ಆರೋಪಿ, ಸೋಮವಾರ ತಡರಾತ್ರಿ 12 ಗಂಟೆ ಸುಮಾರಿಗೆ ಠಾಣೆಗೆ ಬಂದು ಶರಣಾಗಿದ್ದಾನೆ. ಅಲ್ಲದೆ, ಮೂರು ತಿಂಗಳ ಹಿಂದೆ ರೇಖಾಳನ್ನು ಮದುವೆಯಾಗಿದ್ದೆ. ಪತ್ನಿ ಮತ್ತು ಆಕೆಯ ಇಬ್ಬರು ಮಕ್ಕಳನ್ನು ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದೆ. ಆದರೆ, ಆಕೆ 1 ತಿಂಗಳಿಂದ ನನ್ನನ್ನು ಕಡೆಗಣಿಸುತ್ತಿದ್ದಳು. ಅದರಿಂದ ಆಕೆ ಬೇರೆ ಪುರುಷನ ಜತೆ ಸಂಬಂಧ ಹೊಂದಿರುವ ಅನುಮಾನಗೊಂಡು ಆಕೆಗೆ ಚಾಕು ಇರಿದು ಹತ್ಯೆ ಮಾಡಿದ್ದೇನೆ ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ಆದರೆ, ಆಕೆ ಕೆಲಸ ಮಾಡುತ್ತಿದ್ದ ಟೆಲಿಕಾಲ್ ಸೆಂಟರ್ ಮತ್ತು ಮನೆ ಬಳಿ ವಿಚಾರಣೆ ನಡೆಸಿದಾಗ, ಆಕೆ ಮೇಲೆ ಆ ರೀತಿಯ ಯಾವುದೇ ಆರೋಪಗಳು ಕಂಡು ಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.