ರಾಜ್ಯ ಬಜೆಟ್ ನಲ್ಲಿ ಕರಾವಳಿ ಸಂಪೂರ್ಣ ಕಡೆಗಣನೆಗೆ ಶಾಸಕ ಕಾಮತ್ ಆಕ್ರೋಶ

ಮಂಗಳೂರು: ಕಳೆದ ಬಾರಿ ಬಜೆಟ್ ಮಂಡಿಸುವಾಗ “ಬಜೆಟ್ ಎಂಬುದು ಕೇವಲ ಬಿಳಿ ಹಾಳೆ ಅಲ್ಲ” ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಗಿನ ಎಷ್ಟು ಘೋಷಣೆಗಳನ್ನು ಕರಾವಳಿ ಭಾಗದಲ್ಲಿ ಸಾಕಾರಗೊಳಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಿದಾಗ ಮಾತ್ರ ಇವರ ಈಗಿನ ಬಜೆಟ್ ಗೆ ತೂಕ ಬರುತ್ತದೆ. ಇಲ್ಲದಿದ್ದರೆ ಇದು ಕೇವಲ ಬಿಳಿ ಹಾಳೆ ಅಷ್ಟೇ ಆಗುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು.

ಮುಖ್ಯಮಂತ್ರಿಯಾಗಿ ಇದೇ ಅವರ ಕೊನೆಯ ಬಜೆಟ್ ಎಂದು ಕಾಂಗ್ರೆಸ್ ವಲಯದಲ್ಲೇ ವ್ಯಾಪಕವಾಗಿ ಸುದ್ದಿಯಾಗುತ್ತಿದ್ದು, ಕರಾವಳಿಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ನಾರಾಯಣ ಗುರು ಅಭಿವೃದ್ಧಿ ನಿಗಮ ಹಾಗೂ ಬಂಟ್ ನಿಗಮಕ್ಕೆ ಈ ಬಾರಿಯೂ ಅನ್ಯಾಯವೆಸಗಲಾಗಿದ್ದು, ಒಟ್ಟಾರೆಯಾಗಿ ಕರಾವಳಿಯ ಪಾಲಿಗೆ ನೀರಸ ಬಜೆಟ್ ಮಂಡಿಸಿದ್ದು ದುರದೃಷ್ಟಕರ. ಕೇವಲ ತೋರಿಕೆಗಷ್ಟೇ ಮೀನುಗಾರಿಕೆಗೆ ಒಂದಷ್ಟು ಘೋಷಣೆ ಮಾಡಿದ್ದು, ಹಿಂದಿನ ಸೀ ಆಂಬುಲೆನ್ಸ್ ಘೋಷಣೆ ಏನಾಯಿತು ಎಂದು ನೋಡಿದರೆ ಈಗಿನ ಘೋಷಣೆಗಳು ಏನಾಗಲಿವೆ ಎಂಬುದನ್ನು ಊಹಿಸಬಹುದು. ಬಜೆಟ್ ಮಂಡಿಸಿದ ಸಿದ್ದರಾಮಯ್ಯನವರಲ್ಲೇ ಉತ್ಸಾಹ ಇಲ್ಲದ ಮೇಲೆ, ನಾಡಿನ ಜನತೆ, ವಿರೋಧ ಪಕ್ಷ, ಹಾಗೂ ಸ್ವತಃ ಆಡಳಿತ ಪಕ್ಷದ ನಾಯಕರಲ್ಲಿ ಸರ್ಕಾರದ ಮೇಲೆ ಹೊಸ ನಿರೀಕ್ಷೆ ಇರಲು ಹೇಗೆ ಸಾಧ್ಯ? ಎಂದರು.

ತಮ್ಮ ಐದು ಗ್ಯಾರಂಟಿಗಳಿಗೆ ಪ್ರತ್ಯೇಕ ಅನುದಾನ ನಿಗದಿ ಮಾಡದೆ ಆಯಾ ಇಲಾಖೆಗಳ ಅನುದಾನವನ್ನೇ ಕಡಿತಗೊಳಿಸಿ ಪಂಚ ಗ್ಯಾರಂಟಿಗೆ ಜೋಡಿಸಲಾಗಿರುವುದು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರ ಅಭಿವೃದ್ಧಿಗಾಗಿ ಮೀಸಲಿರುವ ವಿಶೇಷ ಅನುದಾನವನ್ನು ಬೇಕಾ ಬಿಟ್ಟಿಯಾಗಿ ಗ್ಯಾರಂಟಿಗೆ ಬಳಸಿಕೊಳ್ಳಲು ಹುನ್ನಾರ ನಡೆಸಿರುವುದು, ರಾಜ್ಯದ ಸಾರ್ವಜನಿಕ ಸಾಲ ಒಟ್ಟು 8.24 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದ್ದು, ಹೀಗೆ ರಾಜ್ಯದ ಭವಿಷ್ಯಕ್ಕೆ ಕೊಳ್ಳಿ ಇಡುವ ಮೂಲಕ ಮುಂದಿನ ಪೀಳಿಗೆಗೆ ಮಹಾ ದ್ರೋಹವೆಸಗಿದ ಈ ಬಜೆಟ್ ಯಾವುದೇ ದೃಷ್ಟಿಯಿಂದಲೂ ಪ್ರಗತಿಪರ ಬಜೆಟ್ ಆಗಿರದೇ, ಕೇವಲ ಕಾಟಾಚಾರದ ಬಜೆಟ್ ಎಂಬಂತಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

error: Content is protected !!