ಬೆಂಗಳೂರು: ಸರ್ಕಾರ ಕೇವಲ ‘ಅಕ್ಕಿ’ ಕೊಟ್ಟು ಕೈ ತೊಳೆದುಕೊಳ್ಳುವ ಹಳೆ ಚಾಳಿಗೆ ಫುಲ್ ಸ್ಟಾಪ್ ಇಟ್ಟಿದೆ. ಈ ಬಾರಿಯ ಬಜೆಟ್ನಲ್ಲಿ ಸದ್ದಿಲ್ಲದೆ ಅಡುಗೆಮನೆಯ ಸಾಮ್ರಾಜ್ಯವನ್ನೇ ಬದಲಿಸುವ ‘ಇಂದಿರಾ ಆಹಾರ ಕಿಟ್’ ಎಂಟ್ರಿಯಾಗಿದೆ!

ಅನ್ನದ ಜೊತೆಗೆ ಒಂದು ಬಟ್ಟಲು ಬೇಳೆ ಸಾರು, ಸ್ವಲ್ಪ ಉಪ್ಪು, ಸಕ್ಕರೆ ಮತ್ತು ಅಡುಗೆಗೆ ಎಣ್ಣೆ ಬೇಕೇ ಬೇಕು. ಇದನ್ನೇ ಮನಗಂಡ ಸರ್ಕಾರ, ಬಡವನ ತಟ್ಟೆಗೆ ಪೌಷ್ಟಿಕಾಂಶ ತುಂಬಲು 6,200 ಕೋಟಿ ರೂ. ಸುರಿಯುತ್ತಿದೆ. ಈ ಕಿಟ್ನಲ್ಲಿ ತೊಗರಿಬೇಳೆ, ಸಿಹಿಯಾದ ಸಕ್ಕರೆ, ಅಯೋಡಿನ್ ಯುಕ್ತ ಉಪ್ಪು ಮತ್ತು ಅಡುಗೆಗೆ ಬೇಕಾದ ಎಣ್ಣೆ. ಸುಮಾರು 4.02 ಕೋಟಿ ಫಲಾನುಭವಿಗಳಿಗೆ ಈ ಕಿಟ್ ತಲುಪಿಸುವ ಗುರಿ ಸರ್ಕಾರದ ಮುಂದಿದೆ. ಹಸಿವು ನೀಗಿಸುವುದು ಒಂದು ಭಾಗವಾದರೆ, ಅಪೌಷ್ಟಿಕತೆಯಿಂದ ಸೊರಗುವ ಮಕ್ಕಳ ಬದುಕಿಗೆ ಬೇಳೆ-ಕಾಳುಗಳ ಬಲ ತುಂಬುವುದು ಈ ಯೋಜನೆಯ ಅಸಲಿ ಕಿಕ್!
ಗೃಹಿಣಿಯರಿಗೆ ʻಡಬಲ್ ಧಮಾಕಾʼ ಸಿಕ್ಕಂತಾಗಿದೆ. ಒಂದು ಕಡೆ ಗೃಹಲಕ್ಷ್ಮಿಯ ಹಣ, ಇನ್ನೊಂದು ಕಡೆ ಕೈಗೆ ಸಿಗುವ ಸಿದ್ಧ ದಿನಸಿ ಕಿಟ್. ಅಂದರೆ, ಅಡುಗೆಮನೆಯ ಅರ್ಧ ಖರ್ಚು ಈಗ ಸರ್ಕಾರದ ಪಾಲಾಯಿತು ಎಂದರ್ಥ.
