ಯೆಮೆನ್: ನಿಮಿಷಾ ಪ್ರಿಯಾ ಗಲ್ಲಿಗೇರಿಸಲೇಬೇಕು ಯೆಮೆನ್ ಉದ್ಯಮಿ ತಲಾಲ್ ಅಬ್ದೋ ಮಹ್ದಿಯ ಸಹೋದರ ಅಬ್ದುಲ್ ಫತ್ತಾಹ್ ಮಹ್ದಿ ಯೆಮೆನ್ ನ್ಯಾಯಾಂಗವನ್ನು ಒತ್ತಾಯಿಸಿದ ಬೆನ್ನಲ್ಲೇ ಅಲ್ಲಿ ಮತ್ತೆ ಸಂಘರ್ಷದ ಸ್ಥಿತಿ ಸೃಷ್ಟಿಯಾಗಿರುವುದು ಆಕೆಯನ್ನು ಶಿಕ್ಷೆಯಿಂದ ಪಾರು ಮಾಡುವ ಪ್ರಯತ್ನಗಳಿಗೆ ಹಿನ್ನಡೆ ಉಂಟಾಗಿದೆ. ನಿಮಿಷಾ ಪ್ರಿಯಾ ಜೈಲಲ್ಲಿರುವ ಸನಾದಲ್ಲಿ ಭದ್ರತಾ ಪರಿಸ್ಥಿತಿ ಅಸ್ಥಿರವಾಗಿದ್ದು, ಅಲ್ಲಿನ ಇತ್ತೀಚಿನ ಪ್ರಾದೇಶಿಕ ಬೆಳವಣಿಗೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ. ಹೀಗಾಗಿ ಮಾತುಕತೆಗೆ ತೆರಳಲಿದ್ದ ನಿಮಿಷಾ ಪ್ರಿಯಾ ಕುಟುಂಬಿಕರ ಪ್ರಯಾಣವನ್ನು ಇನ್ನಷ್ಟು ಅಪಾಯಕಾರಿಯನ್ನಾಗಿ ಮಾಡಿವೆ.
ಹಾಗಾಗಿ ಯಾವುದೇ ಮಾತುಕತೆಗಳು ಬಲಿಪಶುವಿನ ಕುಟುಂಬ ಮತ್ತು ನಿಮಿಷಾ ಪ್ರಿಯಾ ಅವರ ಅಧಿಕೃತ ಪ್ರತಿನಿಧಿಗಳ ನಡುವೆಯೇ ಕಟ್ಟುನಿಟ್ಟಾಗಿ ನಡೆಯಬೇಕು ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಸ್ತುತ ಸಂಘರ್ಷದ ಕಾರಣದಿಂದಾಗಿ ಭಾರತೀಯ ರಾಯಭಾರ ಕಚೇರಿಯನ್ನು ಯೆಮೆನ್ನ ಸನಾದಿಂದ ಸ್ಥಳಾಂತರಿಸಲಾಗಿದೆ. ಹೀಗಾಗಿ ಯೆಮೆನ್ನ ಭಾರತದ ರಾಜತಾಂತ್ರಿಕ ಕಾರ್ಯಾಚರಣೆಯು ಪ್ರಸ್ತುತ ಸೌದಿ ಅರೇಬಿಯಾದ ರಿಯಾದ್ನಿಂದ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ ಯೆಮೆನ್ನಲ್ಲಿ ಸನಾಳನ್ನು ಗಲ್ಲಿಗೇರಿಸಿದ ಆಡಳಿತ ಪ್ರಾಂತ್ಯ ಒಂದು ತುಂಡು ಪ್ರದೇಶವಾಗಿದ್ದು, ಅದಕ್ಕೆ ಯಾವುದೇ ದೇಶದೊಂದಿಗೆ ಸಂಬಂಧವಿಲ್ಲ. ಇದು ಬಂಡುಕೋರರ ಕೈಯ್ಯಲ್ಲಿದ್ದು, ಯೆಮೆನ್ ಸರ್ಕಾರಕ್ಕೂ ಅವರ ಮೇಲೆ ನಿಯಂತ್ರಣವಿಲ್ಲ. ಹೀಗಾಗಿ ಈ ಭಾಗದಲ್ಲಿ ಬಂಡುಕೋರರು ಯಾವಾಗ ಸಂಘರ್ಷಕ್ಕೆ ಇಳಿಯುತ್ತಾರೆಂದೇ ಹೇಳಲು ಸಾಧ್ಯವಿಲ್ಲ. ಪ್ರಸ್ತುತ ಅಲ್ಲಿ ಮತ್ತೆ ಸಂಘರ್ಷಮಯ ವಾತಾವರಣ ಸೃಷ್ಟಿಯಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಭಾರತೀಯರು ಆ ಭಾಗಕ್ಕೆ ತೆರಳದಂತೆ ನಿಷೇಧಿಸಿ ಭಾರತದ ವಿದೇಶಾಂಗ ಸಚಿವಾಲಯ ಸೂಚನೆ ನೀಡಿದೆ.
ನಿಮಿಷಾ ಪ್ರಿಯಾಳ ಕುಟುಂಬಿಕರು ಹಾಗೂ ಆಕೆಯ ಬಿಡುಗಡೆಗೆ ಆಸಕ್ತಿ ವಹಿಸಿರುವ ಮಧ್ಯವರ್ತಿಗಳಿಗೆ ಯೆಮೆನ್ ತೆರಳುವುದು ಅಸಾಧ್ಯವಾಗಿದೆ. ಹೀಗಾಗಿ ಭಾರತದ ವಿದೇಶಾಂಗ ಸಚಿವಾಲಯ, ಮಾತುಕತೆ ಏನಿದ್ದರೂ ರಾಜತಾಂತ್ರಿಕವಾಗಿ ಅಧಿಕೃತ ಪ್ರತಿನಿಧಿಗಳಿಂದಲೇ ನಡೆಯಬೇಕೇ ಹೊರತು ಮಧ್ಯವರ್ತಿಗಳಿಂದ ಸಾಧ್ಯವಿಲ್ಲ. ಯಾಕೆಂದರೆ ಇದೀಗ ಆ ಪ್ರದೇಶದಲ್ಲಿ ಸಂಘರ್ಷಮಯ ವಾತಾವರಣ ಉಂಟಾಗಿದ್ದು, ಸುರಕ್ಷತೆ ಒದಗಿಸುವುದು ಸಾಧ್ಯವಿಲ್ಲ ಎಂದು ಹೇಳಿಕೊಂಡಿದೆ.
2017 ರಲ್ಲಿ ತಲಾಲ್ ಹತ್ಯೆಗೆ ಶಿಕ್ಷೆಗೊಳಗಾದ ಭಾರತೀಯ ನರ್ಸ್ ನಿಮಿಷಾ ಪ್ರಿಯಾಳನ್ನು ತಕ್ಷಣ ಗಲ್ಲಿಗೇರಿಸುವಂತೆ ಹತ್ಯೆಗೀಡಾದ ಯೆಮೆನ್ ಉದ್ಯಮಿ ತಲಾಲ್ ಅಬ್ದೋ ಮಹ್ದಿ ಅವರ ಸಹೋದರ ಅಬ್ದುಲ್ ಫತ್ತಾಹ್ ಮಹ್ದಿ ಮತ್ತೆ ಒತ್ತಾಯಿಸಿದ್ದರು. ಆಗಸ್ಟ್ 3 ರಂದು ಯೆಮೆನ್ನ ಅಟಾರ್ನಿ ಜನರಲ್ ನ್ಯಾಯಾಧೀಶ ಅಬ್ದುಲ್ ಸಲಾಮ್ ಅಲ್-ಹೌತಿ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಕಳೆದ ತಿಂಗಳು ಮುಂದೂಡಲ್ಪಟ್ಟ ನಂತರ ಹೊಸ ಮರಣದಂಡನೆ ದಿನಾಂಕವನ್ನು ನಿಗದಿಪಡಿಸಲು ನ್ಯಾಯಾಂಗವು ತ್ವರಿತವಾಗಿ ಕಾರ್ಯನಿರ್ವಹಿಸಬೇಕೆಂದು ಅಬ್ದುಲ್ ಫತ್ತಾಹ್ ಒತ್ತಾಯಿಸಿದ್ದಾರೆ. ಅಲ್ಲದೆ ಮರಣದಂಡನೆಯನ್ನು ರದ್ದುಪಡಿಸುವ ಬೇಡಿಕೆಯನ್ನು ಮಹ್ದಿ ಕುಟುಂಬ ಟೀಕಿಸಿದ್ದಾರೆ. ಅಲ್ಲದೆ ಕೆಲವರು ನಾವು ನಿಮಷಾರನ್ನು ಮರಣದಂಡನೆ ಶಿಕ್ಷೆಯಿಂದ ಪಾರು ಮಾಡಿದ್ದೇವೆ ಎಂದು ಸುದ್ದಿ ಹಬ್ಬಿಸಿದ್ದನ್ನು ಮಹ್ದಿ ಕುಟುಂಬ ಕಟುವಾಗಿ ಟೀಕಿಸಿದೆ.