ಬೆಂಗಳೂರು: ಖ್ಯಾತ ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ಇತ್ತೀಚೆಗೆ ದರ್ಶನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೇಣುಕಾಸ್ವಾಮಿಗೆ ನ್ಯಾಯ ಸಿಗುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದಕ್ಕೆ ದರ್ಶನ್ ಫ್ಯಾನ್ಸ್ ಗಳು ಅಶ್ಲೀಲವಾಗಿ ಕಮೆಂಟ್ಸ್ ಮಾಡಿದ್ದು ಅವರ ವಿರುದ್ಧ ರಮ್ಯಾ ಪೊಲೀಸರಿಗೆ ದೂರು ನೀಡಿದ್ದರು. ಸೈಬರ್ ಪೊಲೀಸ್ ಠಾಣೆಯಲ್ಲಿ 43 ಅಕೌಂಟ್ಗಳ ವಿರುದ್ಧ ದೂರು ದಾಖಲು ಮಾಡಿದ್ದ ಬೆನ್ನಲ್ಲೇ ಪೊಲೀಸರು ಇಬ್ಬರು ಡಿಬಾಸ್ ಫ್ಯಾನ್ಸ್ ಗಳನ್ನು ಬಂಧಿಸಿ ಲಾಠಿ ರುಚಿ ತೋರಿಸಿದ್ದಾರೆ. ಇನ್ನೂ ಹಲವರ ಬಂಧನ ಬಾಕಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುವಾಗ ‘ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗೋ ಭರವಸೆ ಇದೆ’ ಎಂದಿದ್ದರು. ಇದು ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ದರ್ಶನ್ ಫ್ಯಾನ್ಸ್ ರಮ್ಯಾ ಅವರ ಸೋಶಿಯಲ್ ಮೀಡಿಯಾ ಪೋಸ್ಟ್ಗಳಿಗೆ ಅಶ್ಲೀಲವಾಗಿ ಕಮೆಂಟ್ಗಳನ್ನು ಮಾಡಿದ್ದರು. ಹೀಗಾಗಿ ರಮ್ಯಾ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಸೈಬರ್ ಠಾಣೆಗೆ ದೂರು ದಾಖಲು ಮಾಡಿದ್ದರು. ಬಂಧಿತರಲ್ಲಿ ಓರ್ವ ಬಳ್ಳಾರಿ ಮೂಲದವನಾಗಿದ್ದು, ಮತ್ತೊಬ್ಬ ಚಿತ್ರದುರ್ಗ ಮೂಲದವನಾಗಿದ್ದಾನೆ ಎನ್ನಲಾಗಿದೆ.