ಮಂಗಳೂರು: ಮಂಗಳೂರು ನಗರ ಸಿಸಿಬಿ ಪೊಲೀಸರ ತಂಡ ಬರೋಬ್ಬರಿ 123 ಕೆ.ಜಿ. ಗಾಂಜಾ ಬೇಟೆ ನಡೆಸುವ ಮೂಲಕ ಭರ್ಜರಿ ಕಾರ್ಯಾ ನಡೆಸಿ ಮೂವರನ್ನು ಹೆಡೆಮುರಿಕಟ್ಟಿದೆ. ಆರೋಪಿಗಳ ವಾಹನವನ್ನು ಜಪ್ತಿ ಮಾಡಲಾಗಿದ್ದು, ಇವರು ಆಂಧ್ರಪ್ರದೇಶದಿಂದ ಗಾಂಜಾ ಸಾಗಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳ ಕಾಸರಗೋಡಿನ ಆಡೂರು- ಉರ್ದೂರು ಪೋಸ್ಟ್ ನ ಮೊಗರು ಹೌಸ್ ನಿವಾಸಿ ಮಸೂದ್ ಎಂಕೆ (45), ಕಾರಗೋಡಿನ ಪರಪ್ಪ ದೇಲಂಪಾಡಿ ಪರಪ್ಪ ಪೋಸ್ಟ್ ನಿವಾಸಿ ಮೊಹಮ್ಮದ್ ಆಶಿಕ್(24) ಹಾಗೂ ಸುಬೇರ್ (30) ಬಂಧಿತ ಆರೋಪಿಗಳು.
ಸಿಸಿಬಿ ಪೊಲೀಸರು ಜು.31ರಂದು 2 ಕಾರುಗಳಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದು, ಮೂಡಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮದ ಕಾಂತಾವರ ಕ್ರಾಸ್ನ ಮಠದಕೆರೆ ಎಂಬಲ್ಲಿ ಹೊಂಚು ಹಾಕಿ ಕುಳಿತಿದ್ದರು. ಆಗ ಇದೇ ರಸ್ತೆಯಲ್ಲಿ ಬರುತ್ತಿದ್ದ ಆರೋಪಿಗಳನ್ನು ವಾಹನ ಸಮೇತ ಬಂಧಿಸಿ ಗಾಂಜಾ ಪತ್ತೆಹಚ್ಚಿದ್ದಾರೆ.
ಪೊಲೀಸರು ಆರೋಪಿಗಳಿಂದ 123 ಕೆ.ಜಿ. ಗಾಂಜಾ, ಎರಡು ವಾಹನಗಳು ಮತ್ತು 5 ಮೊಬೈಲ್ ಶಪಡಿಸಿಕೊಂಡಿದ್ದು, ಈ ಎಲ್ಲಾ ಸೊತ್ತಿನ ಒಟ್ಟು ಮೌಲ್ಯ ಸುಮಾರು 46,20,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರ ಪೊಲೀಸರಿಂದ ನಿರಂತರವಾಗಿ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯು ಮುಂದುವರೆದಿರುತ್ತದೆ, ಈ ಬೃಹತ್ ಗಾಂಜಾ ಮಾರಾಟ/ಸಾಗಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.