ಮಂಗಳೂರು: ಛತ್ತೀಸ್ಗಢದಲ್ಲಿ ಕೇರಳದ ಇಬ್ಬರು ಸನ್ಯಾಸಿನಿಯರು ಮೂವರು ಬುಡಕಟ್ಟು ಮಹಿಳೆಯರ ಜೊತೆ ಸಾಗುತ್ತಿದ್ದಾಗ ಅವರ ಮೇಲೆ ಮತಾಂತರ ಹಾಗೂ ಮಾನವ ಕಳ್ಳ ಸಾಗಾಟದ ಸುಳ್ಳು ಆರೋಪ ಹೊರಿಸಿ ಜೈಲಿಗೆ ಹಾಕಿದ್ದಾರೆ. ಬಜರಂಗದಳದ ಕಾರ್ಯಕರ್ತರ ಸುಳ್ಳು ದೂರಿನ ಅನುಸಾರ ಕ್ರೈಸ್ತ ಸನ್ಯಾನಿಯರ ಮೇಲೆ ಪ್ರಕರಣ ದಾಖಲಿಸಿದ ಛತ್ತೀಸ್ಗಢದ ಕ್ರಮ ಖಂಡನೀಯ. ಇದರ ವಿರುದ್ಧ ನಾವು ಹೋರಾಟ ನಡೆಸುವುದಾಗಿ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಜೆ.ಆರ್. ಲೋಬೋ ಎಚ್ಚರಿಕೆ ನೀಡಿದ್ದಾರೆ.
ಛತ್ತೀಸ್ ಗಢದಲ್ಲಿ ಕ್ರೈಸ್ತ ಸನ್ಯಾಸಿನಿಯರ ಬಂಧನ ಖಂಡಿಸಿ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಛತ್ತೀಸ್ ಗಡದ ಸಿಸ್ಟರ್ಸ್ ಬಂಧನದ ವಿರುದ್ಧ ಕೇರಳ ಸೇರಿ ಇಡೀ ದೇಶದಲ್ಲಿ ಪ್ರತಿಭಟನೆ ಆಗ್ತಾ ಉದೆ. ಕಾಂಗ್ರೆಸ್ ವರಿಷ್ಠರಾದ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಶಶಿ ತರೂರು ಖಂಡಿಸಿ ಸಿಸ್ಟರ್ಗಳ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರ ಇರುವ ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಾ ಇದೆ ಎಂದು ಲೋಬೋ ಆರೋಪಿಸಿದರು.
ಇಬ್ಬರು ಸ್ಟಿಸ್ಟರ್ ಸಂಚರಿಸುವಾಗ ಅವರ ಜೊತೆ ಮೂವರು ಹೆಂಗಸರಿದ್ದರು. ಆದರೆ ಸನ್ಯಾಸಿನಿಯರ ಮೇಲೆ ಮತಾಂತರ, ಮಾನವ ಕಳ್ಳ ಸಾಗಣೆ ಎಂಬ ಸುಳ್ಳು ಕೇಸ್ ಹಾಕಿದ್ದಾರೆ. ಬಜರಂಗದಳದ ಜ್ಯೋತಿ ಎಂಬಾಕೆ ರಿಕ್ಷಾದಲ್ಲಿ ಮಾತಾಡುವುದನ್ನು ಕೇಳಿ ದೂರು ಕೊಟ್ಟೆ ಎಂದು ಹೇಳಿದರೂ ಕೇಸ್ ವಾಪಸ್ ಪಡೆದಿಲ್ಲ. ಇದೀಗ ಜು.25ರಿಂದ ಆ.25ರವರೆಗೆ ಬಂಧನ ಆದೇಶ ನೀಡಿದ್ದು, ಜೆಎಂಎಫ್ಸಿ, ಸೆಷನ್ ಕೋರ್ಟಲ್ಲಿ ಜಾಮೀನು ಸಿಗದ ಹಾಗೆ ಪಿತೂರಿ ಮಾಡಲಾಗಿದೆ. ಇದೀಗ ಇವರು ಜಾಮೀನು ಪಡೆಯಲು ಎನ್ಐಎ ಕೋರ್ಟ್ ಅಲೆದಾಡಬೇಕಾಗಿದೆ ಎಂದರು.
ಸಿಸ್ಟರ್ಗಳ ಮೇಲೆ ಬಜರಂಗದಳ ಕಾರ್ಯಕರ್ತರು ಹಲ್ಲೆ ನಡೆಸಿ, ಸುಳ್ಳು ಕೇಸ್ ಹಾಕಿದ್ದಾರೆ. ಕೇರಳ ಬಿಜೆಪಿ ಸಹ ಛತ್ತೀಸ್ಗಡದ ಕೃತ್ಯವನ್ನು ಖಂಡಿಸಿದೆ. ಮಣಿಪುರದಲ್ಲೂ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ವಿದೇಶ ಸುತ್ತಲು ಮೋದಿಗೆ ಸಮಯವಿದೆ ಆದರೆ, ನಮ್ಮದೇ ದೇಶದ ಮಣಿಪುರಕ್ಕೆ ಹೋಗಲು ಪುರ್ಸೊತ್ತಿಲ್ಲ ಎಂದು ಲೋಬೋ ಆರೋಪಿಸಿದರು.
ಕ್ರೈಸ್ತರು ಮತಾಂತರ ಮಾಡುತ್ತಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.90 ಕ್ರೈಸ್ತರೇ ಇರುತ್ತಿದ್ದರು. ಯಾಕೆಂದರೆ ಇಲ್ಲಿ ಶಾಲಾ ಕಾಲೇಜುಗಳು ಮೊದಲು ಕ್ರೈಸ್ತರದ್ದೇ ಆಗಿತ್ತು. ಆದರೂ ಯಾರೂ ಮತಾಂತರ ಆಗಿಲ್ಲ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಛತ್ತೀಸ್ಗಡದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆದ ಕೃತ್ಯವನ್ನು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ. ಪ್ರಕರಣದ ದಾಖಲಿಸುವ ಮುನ್ನ ಸಿಸ್ಟರ್ಗಳ ಜೊತೆ ಇದ್ದ ಮಹಿಳೆಯರ ಹೇಳಿಕೆ ಪಡೆಯಬೇಕಿತ್ತು. ಬಿಜೆಪಿ ಸರ್ಕಾರ ಇರುವಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳಾಗುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಪ್ಪಿ, ಶಾಲೆಟ್ ಪಿಂಟೋ, ಜಾನ್ ಮೊಂತೆರೊ, ಅಲ್ವಿನ್ನ್ ಪ್ರಕಾಶ್ , ಜಾರ್ಜ್ , ಚೇತನ್ ಬೆಂಗ್ರೆ, ನೆಲ್ಸನ್, ಸುಧೀರ್, ಉದಯ ಆಚಾರ್ಯ ಮತ್ತಿತರಿದ್ದರು.