ದೆಹಲಿ: ದೆಹಲಿ, ಹರ್ಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಇಂದು ಬೆಳಗ್ಗೆ 9.04ಕ್ಕೆ ರಿಕ್ಟರ್ ಮಾಪಕದಲ್ಲಿ 4.4 ತೀವ್ರತೆಯಲ್ಲಿ ಭೂಮಿ ಗಡಗಡ ಕಂಪಿಸಿದೆ. ಸುಮಾರು 10 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ತಮ್ಮ ಮನೆಗಳು ಮತ್ತು ಕಚೇರಿಗಳಿಂದ ಹೊರಗೆ ಓಡಿ ಬಂದಿದ್ದರು.
ಭೂಕಂಪದ ಕೇಂದ್ರಬಿಂದು ಹರ್ಯಾಣವಾಗಿದ್ದು, ದೆಹಲಿ, ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ್, ಫರಿದಾಬಾದ್, ಜಿಂದ್, ರೋಹ್ಟಕ್, ಭಿವಾನಿ, ಝಜ್ಜರ್, ಬಹದ್ದೂರ್ಗಢ ಸೇರಿದಂತೆ ಹಲವು ನಗರಗಳಲ್ಲಿ ಕಂಪನದ ಅನುಭವವಾಯಿತು.
ಎರಡು ನಿಮಿಷಗಳಲ್ಲಿ ಝಜ್ಜರ್ನಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದೆ. ಬೆಳಗ್ಗೆ 9.07 ಕ್ಕೆ ಝಜ್ಜರ್ನಲ್ಲಿ ಮೊದಲ ಭೂಕಂಪ ಸಂಭವಿಸಿದೆ. ನಂತರ ಬೆಳಗ್ಗೆ 9.10 ಕ್ಕೆ ಸೌಮ್ಯ ಭೂಕಂಪ ಸಂಭವಿಸಿದೆ. ಹಠಾತ್ ಕಂಪನದಿಂದಾಗಿ ಜನರು ಭಯಭೀತರಾಗಿದ್ದರು. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್ಸಿಎಸ್) ಪ್ರಕಾರ, ಭೂಕಂಪದ ಕೇಂದ್ರಬಿಂದು ಝಜ್ಜರ್ನಿಂದ ಉತ್ತರಕ್ಕೆ 10 ಕಿಲೋಮೀಟರ್ ದೂರದಲ್ಲಿತ್ತು ಮತ್ತು ಅದರ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 4.4 ಎಂದು ಅಳೆಯಲಾಗಿದೆ.
ಝಜ್ಜರ್ ಪಕ್ಕದ ಬಹದ್ದೂರ್ಗಢದಲ್ಲೂ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಕಂಪನದ ಅನುಭವವಾದ ನಂತರ ಜನರು ಬೀದಿಗಿಳಿದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಜನರು ಜಾಗರೂಕರಾಗಿರಲು ಆಡಳಿತವು ಮನವಿ ಮಾಡಿದೆ.
ಭಿವಾನಿಯಲ್ಲಿಯೂ ಸೌಮ್ಯ ಕಂಪನಗಳು ದಾಖಲಾಗಿವೆ ಎಂದು ಎನ್ಸಿಎಸ್ ದೃಢಪಡಿಸಿದೆ, ಆದರೆ ಅದರ ತೀವ್ರತೆ ಮತ್ತು ಕೇಂದ್ರಬಿಂದುವಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ರಿಕ್ಟರ್ ಮಾಪಕವನ್ನು ಬಳಸಿಕೊಂಡು ಭೂಕಂಪಗಳನ್ನು ಅಳೆಯಲಾಗುತ್ತದೆ. ಇದನ್ನು ರಿಕ್ಟರ್ ಮ್ಯಾಗ್ನಿಟ್ಯೂಡ್ ಟೆಸ್ಟ್ ಮಾಪಕ ಎಂದು ಕರೆಯಲಾಗುತ್ತದೆ. ರಿಕ್ಟರ್ ಮಾಪಕದಲ್ಲಿ, ಭೂಕಂಪಗಳನ್ನು 1 ರಿಂದ 9 ರ ಆಧಾರದ ಮೇಲೆ ಅಳೆಯಲಾಗುತ್ತದೆ. ಭೂಕಂಪಗಳನ್ನು ಅದರ ಕೇಂದ್ರಬಿಂದುವಿನಿಂದ ಅಳೆಯಲಾಗುತ್ತದೆ. ಭೂಕಂಪದ ಸಮಯದಲ್ಲಿ ಭೂಮಿಯ ಒಳಗಿನಿಂದ ಬಿಡುಗಡೆಯಾಗುವ ಶಕ್ತಿಯ ತೀವ್ರತೆಯನ್ನು ಇದರಿಂದ ಅಳೆಯಲಾಗುತ್ತದೆ.