ಬೆಳ್ತಂಗಡಿ: ಮನೆಯಲ್ಲಿ ಸಾಕಿದ ಗೋವುಗಳನ್ನು ತಾವೇ ಕಡಿದು ತಮ್ಮದೇ ಅಂಗಡಿಯಲ್ಲಿ ಫ್ರಿಜ್ಜಿನಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದ ಸಹೋದರರ ಅಂಗಡಿ ಮೇಲೆ ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದ ಮಲವಂತಿಗೆ ಅಬ್ದುಲ್ ರಜಾಕ್ (28) ಹಾಗೂ ಅಬ್ದುಲ್ ರವೂಫ್(20) ಪ್ರಕರಣದ ಆರೋಪಿಗಳು.
ಪರವಾನಿಗೆ ಹೊಂದದೇ ಅಕ್ರಮವಾಗಿ ಜಾನುವಾರಿನ ಮಾಂಸವನ್ನು, ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಶೇಖರಿಸಿಟ್ಟಿದ್ದರು. ಈ ಬಗ್ಗೆ ಮಾಹಿತಿ ದೊರೆತ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ ಹೆಚ್ ಮಾದರ ಸಿಬ್ಬಂದಿ ದಾಳಿ ನಡೆಸಿದ್ದು, ಒಟ್ಟು 47 ಕೆ.ಜಿ. ದನದಮಾಂಸವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 51/2025, ಕಲಂ: 4, 12 ಕರ್ನಾಟಕ ಗೋವದೆ ಪ್ರತಿಬಂದಕ ಮತ್ತು ಜಾನುವಾರು ಸಂರಕ್ಷಣಾ ಅದಿನಿಯಮದಂತೆ ಪ್ರಕರಣ ದಾಖಲಿಸಲಾಗಿದೆ.