ಮಂಗಳೂರು: ರಾಜಿಯಾಗಬಹುದಾದ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಇತ್ಯರ್ಥ ಪಡಿಸುವ ʻಲೋಕ ಅದಾಲತ್ʼ ಕಾರ್ಯ ಕ್ರಮ ಜುಲೈ12 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿದೆ ಎಂದು ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಮತ್ತು ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಸವರಾಜ ಹೇಳಿದರು.
ಮಂಗಳೂರಿನ ನ್ಯಾಯಾಲಯದ ಸಂಕೀರ್ಣದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಿದ ಅವರು, ʻತ್ವರಿತ ನ್ಯಾಯಕ್ಕಾಗಿ” ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ವ್ಯಾಜ್ಯ ಇತ್ಯರ್ಥಪಡಿಸಿಕೊಳ್ಳಿರಿ ಎಂಬ ಘೋಷ ವಾಕ್ಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ನ್ಯಾಯಾಧಿಶರು, ಮಂಗಳೂರು ವಕೀಲರ ಸಂಘದ ಅಧ್ಯಕ್ಷರು ಹಾಗೂ ಸದಸ್ಯರುಗಳು, ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿ ಅಭಿಯೋಜಕರು, ಇನ್ನೂರನ್ ಕಂಪೆನಿಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಯಾವೆಲ್ಲಾ ಪ್ರಕರಣಗಳ ಇತ್ಯರ್ಥ?
ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕಾಗಿ ಬಾಕಿ ಇರುವ ಸಿವಿಲ್, ವೈವಾಹಿಕ, ಮೋಟಾರು ಅಪಘಾತ ಪರಿಹಾರ ಪ್ರಕರಣಗಳು, ಚೆಕ್ಬೌನ್ಸ್ ಪ್ರಕರಣಗಳು ಸೇರಿದಂತೆ ಹಲವಾರು ವರಸ್ಪರ ರಾಜಿಯಾಗಬಹುದಾದಂತ ಸಿವಿಲ್, ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುವುದು. ಬ್ಯಾಂಕುಗಳಿಗೆ ಸಂಬಂಧಿಸಿದ ಸಾಲದ ಹಣದ ವಸೂಲಾತಿ ಪ್ರಕರಣಗಳು, ವಿದ್ಯುಚ್ಛಕ್ತಿಮಂಡಳಿ, ಜಲ ಮಂಡಳಿ ಅಥವಾ ಜಿಲ್ಲಾ ನ್ಯಾಯಾಲಯಕ್ಕೆ ಬರಬಹುದಾದಂತಹ ಇತರೆ ಯಾವುದೇ ಪ್ರಕರಣಗಳನ್ನು ಪೂರ್ವ ವ್ಯಾಜ್ಯ ಪ್ರಕರಣಗಳೆಂದು ಪರಿಗಣಿಸಿ, ಅವುಗಳಲ್ಲಿ ಸಹ ಉಭಯ ಕಕ್ಷಿದಾರರನ್ನು ಕರೆಸಿಕೊಂಡು ರಾಜಿ ಸಂಧಾನದ ಮೂಲಕ ವಿವಾದಗಳನ್ನು ಬಗೆಹರಿಸಿ ನ್ಯಾಯ ಒದಗಿಸಲಾಗುವುದು ಎಂದು ಬಸವರಾಜ ಹೇಳಿದರು.
ಸಾಥಿ ಅಭಿಯಾನ
‘ಸಾಥಿ’ ಅಭಿಯಾನದಡಿ ಪರಿತ್ಯಕ್ತ, ಪೋಷಕರಿಲ್ಲದ ಮಕ್ಕಳಿಗೆ ಆಧಾರ್ ಕಾರ್ಡ್ ಅನ್ನು ಮಾಡಿಸಲಾಗುತ್ತಿದ್ದು ಅದಕ್ಕೆ ಅಗತ್ಯವಾದ ಜನನ ಪ್ರಮಾಣ ಪತ್ರವನ್ನು ಪಾಲಿಕೆಯವರು ಮಾಡಿಕೊಡಬೇಕೆಂದರು. ಅಲ್ಲದೆ ವಿಮಾ ಕಂಪೆನಿಗಳ ಸಹಿತ ವಿವಿಧ ಇಲಾಖೆಗಳು ಪ್ರಸಕ್ತ ನ್ಯಾಯಾಲಯದಲ್ಲಿ ಹಾಲಿ ಹಾಗು ಬಾಕಿ ಇರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಹ ಕರಿಸಬೇಕೆಂದು ಮನವಿ ಮಾಡಿದರು.
ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
3148 ಪ್ರಕರಣಗಳ ಇತ್ಯರ್ಥಕ್ಕೆ ಪ್ರಯತ್ನ
ಈ ಹಿಂದೆ 2025 ಮಾರ್ಚ್ 8 ರಂದು ನಡೆದ ಲೋಕ ಅದಾಲತ್ನಲ್ಲಿ ಒಟ್ಟು 57,105 ಪ್ರಕರಣಗಳು ಇದ್ದು ಅದರಲ್ಲಿ 6324 ಪ್ರಕರಣವನ್ನು ಕೈಗೆತ್ತಿ ಗೊಂಡು ಅದರಲ್ಲಿ ಸುಮಾರು 3510 ಪ್ರಕರಣಗಳು ವಿಲೇವಾರಿ ಆಗಿವೆ. ಈ ತಿಂಗಳ ಜುಲೈ 12 ರಂದು ನಡೆಯಲಿರುವ ಲೋಕ ಅದಾಲತ್ ನಲ್ಲಿ 57305 ರಷ್ಟು ಪ್ರಕರಣಗಳಲ್ಲಿ 9302 ಪ್ರಕರಣಗಳ ವಿಚಾರಣೆ ನಡೆದು, 3148 ಪ್ರಕರಣವನ್ನು ಕೈಗೆತ್ತಿಗೊಂಡು ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.
ಮಹಿಳೆಯರಿಗೆ ಮಕ್ಕಳಿಗೆ ಉಚಿತ ಕಾನೂನು ನೆರವು!
ಮಹಿಳೆಯರಿಗೆ, ಮಕ್ಕಳಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ (ಆಯಾಯ ಜಿಲ್ಲೆಯ ಕಾನೂನು ಸೇವೆಗಳ ಪ್ರಾಧಿಕಾರದಿಂದ) ಉಚಿತ ಕಾನೂನು ನೆರವು ದೊರೆಯಲಿದೆ. ಕೆಲವೊಂದು ಪ್ರಕರಣಗಳು ಲೋಕ ಅದಾಲತ್ ನಲ್ಲಿ ಇತ್ಯರ್ಥಗೊಂಡರೆ, ಪ್ರಕರಣ ಇತ್ಯರ್ಥ ಗೊಳಿಸಲು ನ್ಯಾಯಾಲಯಕ್ಕೆ ಕಟ್ಟಿದ ಶುಲ್ಕವನ್ನು ಸಹ ಹಿಂದೆ ನೀಡಲಾಗುವುದು ಎಂದು ಬಸವರಾಜ ತಿಳಿಸಿದರು.
ಯಾವೆಲ್ಲಾ ಪ್ರಕರಣಗಳ ವಿಲೇವಾರಿ?
ನ್ಯಾಯಾಲಯದಲ್ಲಿರುವ ಪಸಕ್ತ ವಿಚಾರಣೆಯಲ್ಲಿರುವ ಪ್ರಕರಣಗಳು ಬೇಗ ಬೇಗ ವಿಲೇವಾರಿ ಆಗಲಿದೆ. ಅಲ್ಲದೆ ವ್ಯವಾಹಿಕ ಜೀವನದ ಪ್ರಕರಣ, ಅಣ್ಣ, ತಮ್ಮಂದಿರ ವ್ಯಾಜ್ಯ, ಚೆಕ್ ಬೌನ್ಸ್ ಪ್ರಕರಣ, ಸಾಲ ವಸೂಲಾತಿ ಪ್ರಕರಣ, ಕ್ಷುಲ್ಲಕ ವಿಚಾರಕ್ಕಾಗಿ ಮಾಡಿದ ಪ್ರಕರಣ, ವಿದ್ಯುತ್ ಮತ್ತು ನೀರಿನ ಬಿಲ್ಗಳ ಪ್ರಕರಣ, ಮೋಟಾರು ವಾಹನ ಕಾಯ್ದೆಗೆ ಸಂಬಂಧ ಪಟ್ಟಿ ಪ್ರಕರಣ, ಕಾರ್ಮಿಕರಿಗೆ ಸಂಬಂಧ ಪಟ್ಟ ಪ್ರಕರಣ, ಜಾಗದ ತಕರಾರು, ಪೆನ್ಷನ್ ವಿಷಯ, ಬಾಡಿಗೆ ಕರಾರುಗಳಿಗೆ ಅನ್ವಯವಾಗುವ ಪ್ರಕರಣ, ಮತ್ತು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣಗಳನ್ನು ಲೋಕ ಅದಾಲತ್ ನಲ್ಲಿ ವಿಲೇವಾರಿ ಮಾಡಲು ಅವಕಾಶ ಇದೆ. ಜೊತೆಗೆ ಹಲವಾರು ವರ್ಷಗಳಿಂದ ಇತ್ಯರ್ಥವಾಗದೆ ಇರುವ ಕೆಲವೊಂದು ಕಠಿಣ ಪ್ರಕರಣಗಳು ಲೋಕ ಅದಾಲತ್ನಲ್ಲಿ ನ್ಯಾಯಾಧೀಶರ ಸಮ್ಮುಖ ವರಸ್ಪರ ರಾಜಿಯಾಗುವ ಮೂಲಕ ವಿಲೇವಾರಿಗೊಂಡು ಸುಖಾಂತ್ಯ ಗೊಳ್ಳುವ ಸನ್ನಿವೇಶ ಕೂಡ ನಿರ್ಮಾಣ ವಾಗಿವೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ದಕ್ಷಿಣ ಕನ್ನಡದ ಸದಸ್ಯ ಕಾರ್ಯದರ್ಶಿ ಶ್ರೀ ಜೈಬುನ್ನಿಸ ಉಪಸ್ಥಿತರಿದ್ದರು.