ಸುರತ್ಕಲ್: ಬೆಮ್ಮೆರೆ ಗುಡ್ಡೆ ಎಂದು ಕರೆಯಲ್ಪಡುತ್ತಿದ್ದ ಸುರತ್ಕಲ್ ಸಮೀಪದ ಕುತ್ತೆತ್ತೂರಿನ ಸೂರಿಂಜೆ ರಸ್ತೆಯ ಮೂರುನಾಡು ಮಾಗಣೆ ಜಾಗದಲ್ಲಿ ಬ್ರಹ್ಮಸ್ಥಾನ ಇತ್ತು ಎಂಬ ಪ್ರತೀತಿಯ ನಡುವೆಯೇ ನಿನ್ನೆ ಪ್ರದೇಶವನ್ನು ಸ್ವಚ್ಛಗೊಳಿಸುವಾಗ ಬ್ರಹ್ಮಸ್ಥಾನದ ಕುರುಹುಗಳು ಪತ್ತೆಯಾಗಿದೆ.
ತುಳುನಾಡಿನಲ್ಲಿ ಹಿಂದೆ ʻಬೆಮ್ಮೆರ್ʼ ಎಂಬ ದೇವರನ್ನು ಅಧಿದೇವರಾಗಿ ಪೂಜಿಸುತ್ತಿದ್ದರು. ಕಾಲಕ್ರಮೇಣ ಬೆರ್ಮೆರ್ನ ಆರಾಧನೆ ನಿಂತುಹೋಗಿದ್ದು, ಅದಕ್ಕೆ ಸಂಬಂಧಪಟ್ಟ ಹಲವು ಸಾನಿಧ್ಯಗಳು ಒಂದಾ ನಶಿಸಿದೆ. ಕೆಲವು ಬ್ರಹ್ಮಲಿಂಗೇಶ್ವರನಂತಹಾ ಕ್ಷೇತ್ರಗಳಾದರೆ ಇನ್ನು ಕೆಲವು ಬ್ರಹ್ಮದೇವರ ಸ್ಥಾನಗಳಾಗಿ ಬದಲಾದವು.
ಬ್ರಹ್ಮಸ್ಥಾನ – ಬೆರ್ಮಸ್ಥಾನವೆಂದೊಡನೆ ಅಂದರೆ ಬ್ರಹ್ಮ( ಬೆರ್ಮೆರ್ – ಬ್ರಹ್ಮೆರ್) ಆರಾಧನೆ ಇರುವ ಸಾನಿಧ್ಯ. ಮೇಗಿಲೋಕದ ದೇವೆರ್ ಎಂದು ತುಳುನಾಡಿನಲ್ಲಿ ಕರೆಯಲಾಗುತ್ತದೆ. ಬೆರ್ಮೆರ್ ಹಾಗೂ ಸೂರ್ಯನಾರಾಯಣ ದೇವರು ತುಳುನಾಡಿನಲ್ಲಿ ಜನಪ್ರಿಯವಾಗಿತ್ತು.
ಬೆರ್ಮ ಸ್ಥಾನವೆಂದರೆ , ನಾಗ, ರಕ್ತೇಶ್ವರಿ(ಲೆಕ್ಕೆಸಿರಿ), ನಂದಿಗೋಣ, ಕ್ಷೇತ್ರಪಾಲ ಎಂಬ ಪಂಚದೈವಗಳನ್ನೊಳಗೊಂಡ ಪೂಜಾಸ್ಥಳ. ಇಂತಹ ಸ್ಥಾನಗಳು ಕುಟುಂಬಕ್ಕೊಂದರಂತೆ ಅಥವಾ ಊರಿಗೊಂದರಂತೆ ಜಿಲ್ಲೆಯಲ್ಲಿ ಬಹುಸಂಖ್ಯೆಯಲ್ಲಿವೆ. ಆದರೆ ಅದರ ಆರಾಧನೆ ಮಾತ್ರ ಕಡಿಮೆಯಾಗಿದೆ. ಒಂದೊಂದು ಬೆರ್ಮಸ್ಥಾನಕ್ಕೂ ಅದರದ್ದೇ ಆದ ವಿಶಿಷ್ಟ ಪೂಜಾಕ್ರಮವಿದೆ. ಪಂಚದೈವಗಳೊಂದಿಗೆ ಸಿರಿಗಳು, ದೈವಗಳು ಸೇರಿಕೊಂಡಾಗ ಆಲಡೆಗಳಾಗಿ ಈ ಬ್ರಹ್ಮಸ್ಥಾನಗಳಾಗಿ ಗುರುತಿಸಲ್ಪಟ್ಟಿದೆ.
ಇದೀಗ ಕುತ್ತೆತ್ತೂರು ಮೂರುನಾಡು ಮಾಗಣೆ ಜಾಗವನ್ನು ಶ್ರಮಾದಾನದ ಮೂಲಕ ಸ್ವಚ್ಛಗೊಳಿಸಿದಾಗ ಬೆರ್ಮೆರೆ ಗುಡ್ಡದಲ್ಲೂ ಬ್ರಹ್ಮಸ್ಥಾನ ಇರುವ ಕುರುಹುಗಳು ಪತ್ತೆಯಾಗಿದೆ. ಮುರಕಲ್ಲಿನಿಂದ ನಿರ್ಮಿಸಲಾದ ಚಚ್ಚೌಕಾಕಾರದ ಆಯತ ರಚನೆಗಳು ಕಂಡು ಬಂದಿದೆ. ಇನ್ನೊಂದು ಇದೇ ಮಾದರಿಯ ಮುರಕಲ್ಲು ರಚನೆಯ ಮೇಲ್ಭಾಗ ʻA ́ ಆಕಾರದ ರಚನೆ ಕಂಡು ಬಂದಿದೆ. ಬೆರ್ಮ ಸ್ಥಾನದ ಗರ್ಭಗುಡಿಯ ರಚನೆಗಳೂ ಕಂಡು ಬಂದಿದ್ದು, ಇದನ್ನು ಮುರಕಲ್ಲುಗಳಿಂದಲೇ ನಿರ್ಮಿಸಲಾಗಿದೆ. ಜೊತೆಗೆ ನಾಗ ದೇವರ ಕುರುಹುಗಳೂ ಪತ್ತೆಯಾಗಿದೆ. ಇಲ್ಲಿಯೇ ತೀರ್ಥಬಾವಿ, ಕೆರೆ ಸೇರಿ ಹಲವು ಕುರುಹುಗಳು ಪತ್ತೆಯಾಗುವ ಸಾಧ್ಯತೆ ದಟ್ಟವಾಗಿದೆ.
ಹಾಗಾಗಿ ಇಲ್ಲಿ ಪುರಾತನ ಕಾಲದಿಂದ ತುಳುನಾಡಿನ ಮೂಲ ಶಕ್ತಿಗಳಾದ ಬೆಮ್ಮೆರ್, ನಂದಿಗೋಣ, ಲೆಕ್ಕೆಸಿರಿ, ಪಂಜುರ್ಲಿ, ನಾಗ, ಕ್ಷೇತ್ರಪಾಲ ಇದನ್ನು ನಂಬಿಕೊಂಡು ಆರಾಧಿಸಲಾಗುತ್ತಿತ್ತು ಎಂದು ಸ್ಪಷ್ಟವಾಗಿದೆ. ಈಗ ಕಂಡು ಬಂದಿರುವ ರಚನೆಗಳು ಬ್ರಹ್ಮಸ್ಥಾನದ ಜೀರ್ಣವಾದ ಕುರುಹುಗಳು ಎನ್ನುವುದು ಸ್ಪಷ್ಟವಾಗಿದೆ. ಅಲ್ಲದೆ ಇಲ್ಲಿ ಪರ್ವ ಕಾಲದಲ್ಲಿ ತೆಂಗಿನ ಕಾಯಿ ಒಡೆಯುವ, ನಾಗನ ಆರಾಧನೆ ಮಾಡುವ ಪದ್ಧತಿ ಅನಾದಿಕಾಲದಿಂದ ನಡೆಯುತ್ತಾ ಬಂದಿದ್ದು, ಈ ಮೂಲಕ ಬೆರ್ಮರಾರಧನೆಯ ಸಂಕೇತಗಳು ಉಳಿದುಕೊಂಡು ಬಂದಿದೆ.
ಪ್ರಶ್ನಾಚಿಂತನೆಯಲ್ಲಿ ಗೋಚರವಾಗಿದ್ದೇನು?
ಈ ಪರಿಸರದ ಮತ್ತು ಊರಿನ ಜನರಿಗೆ ಅಗೋಚರ ದೈವಿಕ ಶಕ್ತಿಗಳ ಇರುವ ವಿವಿಧ ಮೂಲಗಳಿಂದ ಗೋಚರವಾದಾಗ 2011 ನೇ ಇಸವಿಯಲ್ಲಿ ಪ್ರಶ್ನಾ ಚಿಂತನೆಯನ್ನು ಇರಿಸಲಾಗಿತ್ತು. ಆ ಸಂದರ್ಭದಲ್ಲಿ ಇದು 1800 ವರ್ಷಗಳಿಂದಲೂ ಪುರಾತನವಾದ ಮತ್ತು ತುಳುನಾಡಿನ ಮಾಗಣೆಗಳ ಆಡಳಿತ ಕಾಲದಲ್ಲಿ ಐತಿಹಾಸಿಕ ಕುತ್ತೆತ್ತೂರು ಮೂರುನಾಡು ಮಾಗಣೆಯ ವ್ಯಾಪ್ತಿಯ ಜೈನರಿಂದ ಆರಾಧನೆಗೊಳಪಟ್ಟ ಬ್ರಹ್ಮಸ್ಥಾನ ಎಂಬ ವಿಚಾರವು ಪ್ರಕಟವಾಗಿತ್ತು. ಬೆಮ್ಮೆರ್, ನಂದಿಗೋಣ, ಲೆಕ್ಕೆಸಿರಿ, ಪಂಜುರ್ಲಿ, ನಾಗ, ಕ್ಷೇತ್ರಪಾಲ ಇತ್ಯಾದಿ ದೈವಗಳ ಆರಾಧನೆ ಇಲ್ಲಿ ನಡೆಯುತ್ತಿತ್ತು. ವಾರ್ಷಿಕ ಪರ್ವವು ವಿಜೃಂಭಣೆಯಿಂದ ಜರಗುತ್ತಿತ್ತು. ನ್ಯಾಯದ ಕೊಡಿ ಎಂದು ಇದನ್ನು ಕರೆಯಲಾಗುತ್ತಿತ್ತು. ರಥೋತ್ಸವ, ಕೋರ್ದಬ್ಬು ದೈವದ ಭೇಟಿ ನಡೆಯುತ್ತಿತ್ತು ಎಂದು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಿದೆ.
ಇದಕ್ಕೆ ಪುಷ್ಠಿ ನೀಡುವಂತೆ ಈ ಪರಿಸರದಲ್ಲಿರುವ ಮೂರುವರೆ ಎಕ್ರೆ ಗದ್ದೆಯನ್ನು ʻಅಂಗಣʼ ಎಂದು ಈ ಸಮಗ್ರ ಪ್ರದೇಶವನ್ನು ಬೆಮ್ಮೆರೆ ಗುಡ್ಡೆ ಎಂಬ ಹೆಸರಿನಲ್ಲಿ ಈಗಲೂ ಕರೆಯಲಾಗುತ್ತಿದೆ. ಪರ್ವಕಾಲದಲ್ಲಿ ಇಲ್ಲಿ ದೊಡ್ಡ ಮಟ್ಟದ ಸಂತೆ ನೆರೆವೇರುತ್ತಿತ್ತು ಎಂಬ ಮತ್ತು ಇನ್ನಿತರ ಜನಜನಿತವಾದ ನಂಬಿಕೆ ಇದೆ.

ಸದ್ಯ ಈ ಜಮೀನು ಕುತ್ತೆತ್ತೂರಿನ ದೈವಾರಾಧನೆಯ ಪ್ರತಿಷ್ಠಿತ ಬ್ರಹ್ಮ ಸ್ಥಾನ ದಿ. ಕಮಲ ಶೆಟ್ಟಿ ಇವರ ಮಕ್ಕಳ ಮತ್ತು ಪೊಯ್ಯೆ ಮನೆತನದವರ ಸ್ವಾಧೀನದಲ್ಲಿದೆ. ಈ ಪ್ರದೇಶಕ್ಕೆ ಭೇಟಿ ನೀಡಿದ ಖ್ಯಾತ ಐತಿಹಾಸಿಕ ತಜ್ಞ, ಪ್ರಾಧ್ಯಾಪಕರಾದ ಎಸ್.ಎ.ಕೃಷ್ಣಯ್ಯ ಇವರು ಸ್ಥಳವನ್ನು ಮೇಲ್ಮಟ್ಟದಲ್ಲಿ ಅಧ್ಯಯನ ಮಾಡಿ ಸದ್ಯದ ರಚನೆಗಳು ಕ್ರಿ.ಶ. 1300 ರಿಂದ 1400 ರ ಅವಧಿಯದ್ದು ಆಗಿರಬಹುದೆಂದು ಅಂದಾಜಿಸಿದ್ದಾರೆ. ಇದೀಗ ದೊರೆತ ರಚನೆಗಳ ಬಗ್ಗೆ ಆಳವಾದ ಅಧ್ಯಯನ ನಡೆಸಲು ಅವರು ಮುಂದಾಗಿದ್ದಾರೆ.
ಜೀರ್ಣೋದ್ಧಾರಕ್ಕೆ ಮುಂದಾದ ಊರವರು:
ಈ ಶ್ರದ್ದಾ ಕೇಂದ್ರದ ಜೀರ್ಣೋದ್ದಾರವನ್ನು ಮಾಡಬೇಕು ಎಂದು ಈ ಪರಿಸರದ ಶ್ರದ್ಧಾಳುಗಳು ಕುತ್ತೆತ್ತೂರು – ಸೂರಿಂಜೆ ಗ್ರಾಮದ ಜನತೆ ನಿರ್ಧರಿಸಿದ್ದಾರೆ. ಜೀರ್ಣೊದ್ದಾರದ ಕಾರ್ಯ ನೆರವೇರುವ ಸಲುವಾಗಿ ಬ್ರಾಹ್ಮಣ ಕುಟುಂಬದವರು ಸುಮಾರು 70 ವರ್ಷಗಳಿಂದ ಇಲ್ಲಿ ಪ್ರತಿ ಸಂಕ್ರಮಣದಂದು ತೆಂಗಿನ ಕಾಯಿ ಒಡೆಯುವ ಕಾರ್ಯವನ್ನು ಮಾಡಿಕೊಂಡು ಬಂದಿದ್ದಾರೆ. ಎರಡು ಬಾರಿ ನಾಗದರ್ಶನ ನಡೆದಿದೆ. ಮೂರು ವರ್ಷದಿಂದ ಪ್ರತಿ ಪಂಚಮಿಯಂದು ತನು ಸೇವೆ, ನಾಗರಪಂಚಮಿಯ ದಿನ ನಾಗಾರಾಧನೆ ನಡೆಯುತ್ತಾ ಬಂದಿದೆ.
ಜೀರ್ಣೊದ್ಧಾರದ ಸಲುವಾಗಿ ವಿವಿಧ ದೇವಳಗಳಲ್ಲಿ ಪೂಜೆ. ಸಾನಿಧ್ಯದಲ್ಲಿ ಗಣಹೋಮ, ಮೃತ್ಯುಂಜಯ ಹೋಮ, ಅಘೋರ ಹೋಮ, ಸಾಯುಜ್ಯಪೂಜೆ, ಸರ್ಪ ಸಂಸ್ಕಾರ ಇತ್ಯಾದಿಗಳನ್ನು ಮಾಡಲಾಗಿದೆ. ಈಗ ಬ್ರಹ್ಮಸ್ಥಾನವನ್ನು ಪುನರ್ ನಿರ್ಮಿಸುವ ಉದ್ದೇಶದಿಂದ ಇಲ್ಲಿನ ಶಕ್ತಿಗಳ ಸಂಕೋಚಾದಿ ವಿಧಿ ವಿಧಾನಗಳನ್ನು ನಡೆಸಲಾಗುತ್ತಿದೆ.
ಮುಂದಿನ ದಿನಗಳಲ್ಲಿ ಹಿಂದಿನ ಕಾಲದ ಪುರಾವೆಗಳನ್ನು ಉಳಿಸಿಕೊಳ್ಳುವ ಪ್ರಯತ್ನದೊಂದಿಗೆ ವಿನೂತನವಾದ, ಸರಳ ರೀತಿಯ ಬ್ರಹ್ಮಸ್ಥಾನವನ್ನು ಪುನರ್ನಿರ್ಮಿಸುವ ಕಾರ್ಯ ಕುತ್ತೆತ್ತೂರು – ಸೂರಿಂಜೆ ಗ್ರಾಮಸ್ಥರಿಂದ ನಡೆಯಲಿದೆ. ಇದಕ್ಕೆ ಪೂರಕ ಎನ್ನುವಂತೆ ಜೂನ್ 5ರಂದು ಕ್ಷೇತ್ರದಲ್ಲಿ ಸಂಕೋಚ ಪ್ರಕ್ರಿಯೆ ನಡೆಸಲಾಗಿದೆ. ಅಂದು ಜೈನ ಯತಿಗಳಾದ ಶ್ರೀಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮೂಡುಬಿದ್ರೆ ಅವರು ಜೀರ್ಣೋದ್ಧಾರ ಪ್ರಕ್ರಿಯೆಗೆ ಸಾಂಕೇತಿಕವಾಗಿ ಚಾಲನೆ ನೀಡಿದ್ದರು. ಮೂಲ್ಕಿ ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್, ಐತಿಹಾಸಿಕ ತಜ್ಞ, ಪ್ರಾಧ್ಯಾಪಕರಾದ ಎಸ್.ಎ.ಕೃಷ್ಣಯ್ಯ, ಮೂರುನಾಡು ಮಾಗಣೆ ಗಡಿಪ್ರಧಾನರಾದ ಅಶೋಕ ಪೈವ ಹೆಗ್ಗಡೆ, ಊರ ಭಕ್ತರು ಉಪಸ್ಥಿತರಿದ್ದರು.