ಕುತ್ತೆತ್ತೂರಿನ ಬೆಮ್ಮೆರೆ ಸ್ಥಾನಕ್ಕೆ ಜೀರ್ಣೋದ್ಧಾರ ಅಭಿನಂದನೀಯ: ಚಾರುಕೀರ್ತಿ ಸ್ವಾಮೀಜಿ

ಸುರತ್ಕಲ್: ಕುತ್ತೆತ್ತೂರಿನಲ್ಲಿ ಪ್ರಾಚೀನ ಕಾಲದಿಂದಲೂ ಬ್ರಹ್ಮಸ್ಥಾನ ಇತ್ತು ಎನ್ನುವ ಪ್ರತೀತಿ ಇದ್ದು, ಇದಕ್ಕೆ ಹಿರಿಯರ ಕಾಲದಲ್ಲಿ ವಿಜೃಂಭಣೆಯಿಂದ ಆರಾಧನೆಗಳು ನಡೆಯುತ್ತಿತ್ತು ಎಂಬುವುದಾಗಿ ಪ್ರಶ್ನೆಯಿಂದ ತಿಳಿದುಬಂದಿದೆ. ಬ್ರಹ್ಮಸ್ಥಾನ ಇರುವ ಜಾಗ ದೈವಿಕ ಜಾಗೃತವುಳ್ಳ ಪ್ರದೇಶವಾಗಿದ್ದು, ಇಲ್ಲಿ ಕಂಬಳ ಕೋಣಗಳು ಇದ್ದವು ಎನ್ನುವ ಪ್ರತೀತಿ ಇದೆ. ಈ ಬ್ರಹ್ಮಸ್ಥಾನಕ್ಕೆ ಊರವರು ಸೇರಿ ಜೀರ್ಣೋದ್ಧಾರ ಪ್ರಕ್ರಿಯೆಗೆ ಮುಂದಾಗಿರುವುದು ಅಭಿನಂದನೀಯ ಎಂದು ಮೂಡಬಿದ್ರೆ ಜೈನ ಮಠದ ಶ್ರೀ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಬ್ರಹ್ಮಸ್ಥಾನ ಕುತ್ತೆತ್ತೂರು ಮೂರುನಾಡು ಮಾಗಣೆ ಇಲ್ಲಿನ ಬ್ರಹ್ಮಸ್ಥಾನ ಪುನರ್ ನಿರ್ಮಾಣದ ಪ್ರಯುಕ್ತ ಸಂಕೋಚ ವಿಧಿವಿಧಾನ ನಡೆಸಿ ಆಶೀರ್ವಚನ ನೀಡಿದರು.

ಈ ಸಂದರ್ಭ ಬ್ರಹ್ಮ ಸಾನಿಧ್ಯದಲ್ಲಿನ ನಾಗ ದೇವರ ಬಿಂಬವನ್ನು ಬಾಲಾಲಯದಲ್ಲಿ ಇರಿಸಲಾಯಿತು. ಬ್ರಹ್ಮ ಸ್ಥಾನದ ನೀಲ ನಕ್ಷೆಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ಕುಡುಪು ಕೃಷ್ಣರಾಜ ತಂತ್ರಿ ಮತ್ತು ಹಯವದನ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಮಿತ್ತೋಡಿ ಅರಸು ಮನೆ ಸತೀಶ್ ಹೆಗ್ಡೆ, ಇತಿಹಾಸ ತಜ್ಞ. ಪ್ರೊಫೆಸರ್ ಎಸ್.ಎ. ಕೃಷ್ಣಯ್ಯ. ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕೋಡಿಕಾನ ಶ್ರೀಧರ್ ಉಡುಪ, ಉದ್ಯಮಿ ಮನೋಹರ್ ಶೆಟ್ಟಿ ಬೊಳ್ಳಾರು ಗುತ್ತು, ನಾಗೇಶ್, ಪ್ರತಾಪ್ ಶೆಟ್ಟಿ, ವಿಶ್ವನಾಥ ಶೆಟ್ಟಿ, ದಯಾನಂದ, ಸುಕೇಶ್ ಶೆಟ್ಟಿ ಬೈಲಗುತ್ತು, ಅಭಿಲಾಷ್ ಶೆಟ್ಟಿ ಕಟೀಲು ಮತ್ತಿತರರು ಉಪಸ್ಥಿತರಿದ್ದರು.ಸಂತೋಷ್ ಶೆಟ್ಟಿ ಪ್ರಾಸ್ತಾವಿಕ ವಾಗಿ ಮಾತನಾಡಿ ರೂಪುರೇಷೆಗಳನ್ನು ವಿವರಿಸಿದ್ದರಲ್ಲದೆ ಇಲ್ಲಿ ವೃದ್ಧಾಶ್ರಮ ಮಾಡುವ ಉದ್ದೇಶವಿದೆ ಎಂದು ನುಡಿದರು. ಮನೋಜ್ ಶೆಟ್ಟಿ ನಿರೂಪಿಸಿದರು, ಸತೀಶ್ ಶೆಟ್ಟಿ ವಂದಿಸಿದರು.

ಬೆಮ್ಮೆರ್‌ ಪರಿವಾರ ದೈವ ದೇವರ ನೆಲೆವೀಡು
ಈ ಬ್ರಹ್ಮಸ್ಥಾನ ಪುರಾತನ ಕಾಲದಿಂದ ತುಳುನಾಡಿನ ಮೂಲ ಶಕ್ತಿಗಳಾದ ಬೆಮ್ಮೆರ್, ನಂದಿಗೋಣ, ಲೆಕ್ಕೆಸಿರಿ, ಪಂಜುರ್ಲಿ, ನಾಗ, ಕ್ಷೇತ್ರಪಾಲ ನೆಲೆ ನಿಂತಿರುವ ಸಾನಿಧ್ಯವಾಗಿದ್ದು, ಅನಾದಿ ಕಾಲದಿಂಲೂ ಇಲ್ಲಿ ಆರಾಧನೆಗಳು ನಡೆದ ಕುರುಹುಗಳನ್ನು ಇತಿಹಾಸ ತಜ್ಞರು ಕಂಡುಕೊಂಡಿದ್ದಾರೆ.
ಈ ಪರಿಸರದ ಜನರಿಗೆ ಇಲ್ಲಿ ಅಗೋಚರ ದೈವಿಕ ಶಕ್ತಿಗಳ ಅನುಭವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 2011ರಲ್ಲಿ ಪ್ರಶ್ನಾ ಚಿಂತನೆಯನ್ನು ಇರಿಸಿದಾಗ ಇದು 1800 ವರ್ಷಗಳಿಂದಲೂ ಪುರಾತನವಾದ ಮತ್ತು ತುಳುನಾಡಿನ ಮಾಗಣೆಗಳ ಆಡಳಿತ ಕಾಲದಲ್ಲಿ ಐತಿಹಾಸಿಕ ಕುತ್ತೆತ್ತೂರು ಮೂರುನಾಡು ಮಾಗಣೆಯ ವ್ಯಾಪ್ತಿಯ ಜೈನರಿಂದ ಆರಾಧನೆಗೊಳಪಟ್ಟ ಬ್ರಹ್ಮಸ್ಥಾನ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಈ ಕ್ಷೇತ್ರದಲ್ಲಿನ ಶಕ್ತಿಗಳಿಗೆ ವಾರ್ಷಿಕ ಪರ್ವವು ವಿಜೃಂಭಣೆಯಿಂದ ಜರಗುತ್ತಿತ್ತು. ನ್ಯಾಯದ ಕೊಡಿ ಎಂದು ಇದನ್ನು ಕರೆಯಲಾಗುತ್ತಿತ್ತು. ರಥೋತ್ಸವ, ಕೋರ್ದಬ್ಬು ದೈವದ ಭೇಟಿ ನಡೆಯುತ್ತಿತ್ತು ಎಂಬ ವಿಚಾರವನ್ನು ಪ್ರಶ್ನಾ ಚಿಂತನೆಯಲ್ಲಿ ಕಂಡುಕೊಳ್ಳಲಾಗಿತ್ತು.


ಇದಕ್ಕೆ ಪುಷ್ಠಿ ನೀಡುವಂತೆ ಈ ಪರಿಸರದಲ್ಲಿರುವ ಮೂರುವರೆ ಎಕ್ರೆ ಗದ್ದೆಯನ್ನು ʻಅಂಗಣʼ ಎಂದು ಕರೆಯಲಾಗುತ್ತದೆ. ಇಲ್ಲಿನ ಸಮಗ್ರ ಪ್ರದೇಶವನ್ನು ʻಬೆಮ್ಮೆರೆ ಗುಡ್ಡೆʼ ಎಂಬ ಹೆಸರಿನಲ್ಲಿ ಈಗಲೂ ಕರೆಯಲಾಗುತ್ತಿದೆ. ಖ್ಯಾತ ಐತಿಹಾಸಿಕ ತಜ್ಞ, ಪ್ರಾಧ್ಯಾಪಕರಾದ ಎಸ್.ಎ.ಕೃಷ್ಣಯ್ಯ ಇವರು ಸ್ಥಳವನ್ನು ಮೇಲ್ಮಟ್ಟದಲ್ಲಿ ಅಧ್ಯಯನ ಮಾಡಿ ಇಲ್ಲಿನ ರಚನೆಗಳು ಕ್ರಿ.ಶ. 1300 ರಿಂದ 1400 ರ ಅವಧಿಯದ್ದು ಆಗಿರುವ ಸಾಧ್ಯತೆ ಎನ್ನುವುದನ್ನು ಸಂಶೋಧಿಸಿದ್ದಾರೆ.
ಜೀರ್ಣೊದ್ದಾರದ ಸಲುವಾಗಿ ವಿವಿಧ ದೇವಳಗಳಲ್ಲಿ ಪೂಜೆ, ಸಾನಿಧ್ಯದಲ್ಲಿ ಗಣಹೋಮ, ಮೃತ್ಯುಂಜಯ ಹೋಮ, ಅಘೋರ ಹೋಮ, ಸಾಯುಜ್ಯ ಪೂಜೆ, ಸರ್ಪ ಸಂಸ್ಕಾರ ಇತ್ಯಾದಿಗಳನ್ನು ಮಾಡಲಾಗಿದೆ.

error: Content is protected !!