ಮಂಗಳೂರು: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಪಿಕಪ್ ಚಾಲಕ ಅಬ್ದುಲ್ ರೆಹ್ಮಾನ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಸುಮಿತ್ ಧನುಪೂಜೆ ಹಾಗೂ ಧನರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 5ಕ್ಕೇರಿಕೆಯಾಗಿದೆ.
ಗುರುವಾರ ಸಂಜೆ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಕುರಿಯಾಳ ಗ್ರಾಮದ ದಿ.ಯೋಗಿಶ್ ಪೂಜಾರಿ ಎಂಬವರ ಪುತ್ರ ದೀಪಕ್ ಪೂಜಾರಿ(21), ಅಮ್ಮುಂಜೆ ಗ್ರಾಮ ಶಿವಾಜಿ ನಗರ ಭದ್ರಕಾಳಿ ದೇವಸ್ಥಾನದ ಬಳಿಯ ನಿವಾಸಿ ಪ್ರಮೋದ್ ರಾಜ್ ಜೋಗಿ ಎಂಬವರ ಪುತ್ರ ಪೃಥ್ವಿರಾಜ್(21), ಅಮ್ಮುಂಜೆ ಗ್ರಾಮ ಶಿವಾಜಿನಗರ ಸುರೇಶ ಬೆಳ್ಳಡ ಎಂಬವರ ಪುತ್ರ ಚಿಂತನ್(19) ಎಂಬವರನ್ನು ಬಂಧಿಸಿದ್ದರು. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.