ಅಬ್ದುಲ್ ರೆಹ್ಮಾನ್ ಹತ್ಯೆ: ಮೂವರು ಆರೋಪಿಗಳ ಬಂಧನ!

ಮಂಗಳೂರು: ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಬ್ದುಲ್ ರಹಿಮಾನ್ ಎಂಬವರ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕುರಿಯಾಳ ಗ್ರಾಮದ ದಿ.ಯೋಗಿಶ್ ಪೂಜಾರಿ ಎಂಬವರ ಪುತ್ರ ದೀಪಕ್ ಪೂಜಾರಿ(21), ಅಮ್ಮುಂಜೆ ಗ್ರಾಮ ಶಿವಾಜಿ ನಗರ ಭದ್ರಕಾಳಿ ದೇವಸ್ಥಾನದ ಬಳಿಯ ನಿವಾಸಿ ಪ್ರಮೋದ್ ರಾಜ್ ಜೋಗಿ ಎಂಬವರ ಪುತ್ರ ಪೃಥ್ವಿರಾಜ್(21), ಅಮ್ಮುಂಜೆ ಗ್ರಾಮ ಶಿವಾಜಿನಗರ ಸುರೇಶ ಬೆಳ್ಳಡ ಎಂಬವರ ಪುತ್ರ ಚಿಂತನ್(19) ಎಂದು ಹೆಸರಿಸಲಾಗಿದೆ.
ಪ್ರಕರಣದ ವಿವರ:
ದಿನಾಂಕ 27.05.2025 ರಂದು ಮಧ್ಯಾಹ್ನ ಸಮಯದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ನಡೆದ ಅಬ್ದುಲ್ ರಹಿಮಾನ್ ಎಂಬವರ ಕೊಲೆ ಮತ್ತು ಅವರ ಜೊತೆಯಿದ್ದ ಕಲಂದರ್ ಶಾಫಿ ಎಂಬವರ ಮೇಲೆ ನಡೆದ ಗಂಭೀರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಟ್ವಾಳ ಗ್ರಾಮಾಂತರ ಠಾಣಾ ಅ.ಕ್ರ 54/2025 191[1], 191[2], 191[3], 118[1]. 118 [2], 109, 103 3 190 BNS 2023 ಪ್ರಕರಣ ದಾಖಲಾಗಿರುತ್ತದೆ.
ಸದ್ರಿ ಪ್ರಕರಣದಲ್ಲಿ ಆರೋಪಿಗಳ ಶೀಘ್ರ ಪತ್ತೆಗಾಗಿ ಬಂಟ್ವಾಳ ಪೊಲೀಸ್ ಉಪಾಧೀಕ್ಷಕರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ನೇಮಿಸಿ, 05 ತನಿಖಾ ತಂಡಗಳನ್ನು ರಚಿಸಿ ಆರೋಪಿ ಪತ್ತೆಕಾರ್ಯ ನಡೆಸಲಾಗಿರುತ್ತದೆ. ಸದ್ರಿ ತನಿಖಾ ತಂಡವು ದಿನಾಂಕ 29.05.2025 ರಂದು ಬಂಟ್ವಾಳ ಕಳ್ಳಿಗೆ ಗ್ರಾಮದ ಕನಪಾಡಿ ಎಂಬಲ್ಲಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಉಳಿದ ಆರೋಪಿಗಳ ಪತ್ತೆ ಕಾರ್ಯವು ಪಗತಿಯಲ್ಲಿರುತ್ತದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

error: Content is protected !!