ಬೆಂಗಳೂರು: ನೈರುತ್ಯ ಮಾನ್ಸೂನ್ ಮಾರುತಗಳು ಇಂದು ಕೇರಳ ಕರಾವಳಿಗೆ ಗ್ರಾಂಡ್ ಎಂಟ್ರಿ ಕೊಟ್ಟಿದ್ದು, ಜೂನ್ 1ಕ್ಕೆ ಮಂಗಳೂರು ಪ್ರವೇಶಿಸಲಿದೆ. ಇದರಿಂದ ರೈತರು ಫುಲ್ ಖುಷಿಯಾಗಿದ್ದು, ಬಿತ್ತನೆ ಕಾರ್ಯ ನಡೆಸಲು ತಯಾರಿ ಆರಂಭಿಸಿದ್ದಾರೆ.
ಮೇ 27ಕ್ಕೆ ಮುಂಗಾರು ಮಾರುತಗಳು ಕೇರಳ ಕರಾವಳಿ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಇದೇ ಹೇಳಿತ್ತು. ಆದರೆ ಅದಕ್ಕಿಂತ ಮೂರು ದಿನ ಮೊದಲೇ ಮುಂಗಾರು ಪ್ರವೇಶಿಸಿ ರೈತರಿಗೆ ಸರ್ಪ್ರೈಸ್ ನೀಡಿದ್ದಾಗಿ ಹವಾಮಾನ ಇಲಾಖೆ ಇಂದು ತಿಳಿಸಿದೆ.
2009ರಲ್ಲಿ ಮೇ 23ಕ್ಕೆ ಮುಂಗಾರು ಭಾರತದ ಕರಾವಳಿ ಪ್ರವೇಶಿಸಿತ್ತು. ಆದರೆ ಈ ಬಾರಿ ವಾಯಭಾರ ಕುಸಿತ ಹಾಗೂ ಬಂಗಾಳ ಕೊಲ್ಲಿಯಲ್ಲಿ ಬೀಸಿದ ಚಂಡಮಾರುತದಿಂದಾಗಿ ಮಳೆ ಪುಟಪುಟನೆ ಸುರಿಯುತ್ತಿದೆ. ಇದೀಗ ಮುಂಗಾರಿನ ಅಧಿಕೃತ ಪ್ರವೇಶದಿಂದ ವಾಡಿಕೆಗಿಂತಲೂ ಅಧಿಕ ಮಳೆ ಬೀಳುವ ಸಾಧ್ಯತೆ ದಟ್ಟವಾಗಿದೆ.
ಸಾಮಾನ್ಯವಾಗಿ ಜೂನ್ 1 ರಂದು ಮುಂಗಾರು ಕೇರಳ ಕರಾವಳಿ ಪ್ರವೇಶಿಸುತ್ತದೆ. ಇದಾದ ಐದು ದಿನಗಳ ನಂತರ ಮಂಗಳೂರು ಪ್ರವೇಶಿಸುತ್ತದೆ. ಆದರೆ ಈ ಬಾರಿ ಮಳೆರಾಯ ಎಲ್ಲಾ ಉಲ್ಟಾ ಹೊಡೆದು ಶೀಘ್ರವಾಗಿ ಎಂಟ್ರಿ ಕೊಟ್ಟಿದ್ದಾರೆ. ಮಳೆರಾಯನ ಅಬ್ಬರದ ಪ್ರವೇಶಕ್ಕೆ ರೈತರು ಬಿತ್ತನೆ ಮಾಡುವ ಮೂಲಕ ಪೂರ್ಣಕುಂಭ ಸ್ವಾಗತ ನೀಡಿದ್ದಾರೆ.