ಮೂಡಬಿದ್ರೆ: ಗ್ರಾಮಾಂತರ ಪ್ರದೇಶದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಅಧ್ಯತೆ ನೀಡಲಾಗಿದೆ ಎಂದು ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಅವರು ಮಧ್ಯ ಸರ್ಕಲ್ನಿಂದ ಮಧ್ಯ ಗುರುನಗರ 9ನೇ ವಿಭಾಗದ ಐಟಿಐ ತನಕದ ಮುಖ್ಯ ರಸ್ತೆ ಡಾಮರೀಕರಣಕ್ಕೆ ಶಾಸಕರ ಮುಖಾಂತರ ಲೋಕೋಪಯೋಗಿ ಇಲಾಖೆಯ ವತಿಯಿಂದ ಸುಮಾರು 1 ಕೋಟಿ ಮೊತ್ತದ ಅನುದಾನದಿಂದ ಕಾಮಗಾರಿ ನಡೆದಿದ್ದು ಅದರ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಳೆದ ಬಾರಿ ಬಿಜೆಪಿ ಸರಕಾರ ಇರುವಾಗ ಐದು ವರ್ಷದಲ್ಲಿ ಸುಮಾರು ರೂ. 2000 ಕೋಟಿ ಅನುದಾನ ತಂದು ಹೆಚ್ಚಿನ ರಸ್ತೆಗಳ ಅಭಿವೃದ್ಧಿ ಕೆಲಸ ಮಾಡಿದ್ದು ಅದರ ತೃಪ್ತಿ ನನಗಿದೆ. ಆದರೆ ಈಗಿನ ಕಾಂಗ್ರೆಸ್ ಸರಕಾರ ಬಿಟ್ಟಿಭಾಗ್ಯದಿಂದಾಗಿ ಅನುದಾನವಿಲ್ಲದೆ ಎರಡು ವರ್ಷಗಳಲ್ಲಿ ಶಾಸಕರಿಗೆ ಕೇವಲ 18 ಕೋಟಿಯಷ್ಟು ಅನುದಾನ ಕೊಡುವ ಮೂಲಕ ಅಭಿವೃದ್ಧಿಗೆ ಬಹಳಷ್ಟು ಅನುದಾನದ ಕೊರತೆಯಾಗಿದೆ. ಆದರೂ ಇಲ್ಲಿ ಅಗಬೇಕಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಸ್ಥಳೀಯ ಪ್ರಮುಖರು ಗಮನಕ್ಕೆ ತಂದ ನಂತರ ಅಗತ್ಯ ಅನುದಾನವನ್ನು ಹೊಂದಿಸಿಕೊಂಡು ಕಾಮಗಾರಿ ಮುಗಿಸಲಾಗಿದೆ ಎಂದರು.
ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಾತನಾಡಿ, ಇಷ್ಟರವರೆಗೆ ಶಾಸಕರು ಚೇಳೈರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 30 ಕೋಟಿಗಳಷ್ಟು ಅನುದಾನ ಇರಿಸಿ ಬೇರೆ ಬೇರೆ ಅಭಿವೃದ್ಧಿ ಕಾಮಗಾರಿಯನ್ನು ಮಾಡಿದ್ದಾರೆ. ಈ ರಸ್ತೆಯು ಬಹಳ ಪ್ರಮುಖ್ಯವಾದುದು ಎನ್ನುವುದನ್ನು ಮನಗಂಡು ಅದಷ್ಟು ಶೀಘ್ರವಾಗಿ ಈ ರಸ್ತೆಗೆ ಅನುದಾನವಿರಿಸಿದ ಶಾಸಕರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದರು.
ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಸದಸ್ಯರಾದ ಯಶೋದ ಬಿ., ಬಾಲಕೃಷ್ಣ ಶೆಟ್ಟಿ, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ವಜ್ರಾಕ್ಷಿ ಪಿ. ಶೆಟ್ಟಿ, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ವಸಂತ್, ಪ್ರಮುಖರಾದ ಪ್ರಭಾಕರ ಶೆಟ್ಟಿ, ವಿನೋದ್ ಆಳ್ವ ಮಧ್ಯ, ಸತೀಶ್ ಕೋಟ್ಯಾನ್ ಮಧ್ಯ, ಶಾಫಿ ಮಧ್ಯ ಗುತ್ತಿಗೆದಾರ ಎಂ.ಜಿ.ಹುಸೇನ್ ಮುಂತಾದವರು ಉಪಸ್ಥಿತರಿದ್ದರು