ಬೆಂಗಳೂರು: ಸಿಗರೇಟ್ ತಂದು ಕೊಡದಿದಕ್ಕೆ ಸಾಫ್ಟ್ವೇರ್ ಉದ್ಯೋಗಿಯೋರ್ವ ಬೈಕ್ಗೆ ಕಾರ್ ಗುದ್ದಿಸಿದ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯಪುರ ಪೊಲೀಸ್ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಇದರಿಂದ ಒಬ್ಬ ಮೃತಪಟ್ಟಿದ್ದು ಇನ್ನೊಬ್ಬ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಫ್ಟ್ವೇರ್ ಉದ್ಯೋಗಿ ಪ್ರತೀಕ್ ಕೃತ್ಯ ಎಸಗಿದ ಆರೋಪಿಯಾಗಿದ್ದು, ಈತನಿಂದ ಸಂಜಯ್ ಮೃತಪಟ್ಟಿದ್ದು, ಕಾರ್ತಿಕ್ ಎನ್ನುವಾತ ಗಂಭೀರ ಗಾಯಗೊಂಡಿದ್ದಾನೆ.
ಸಾಫ್ಟ್ವೇರ್ ಉದ್ಯೋಗಿಗಳಾಗಿದ್ದ ಸಂಜಯ್, ಕಾರ್ತಿಕ್ ಸಿಗರೇಟ್ ಸೇದಲೆಂದು ಕಚೇರಿಯಿಂದ ಹೊರಬಂದಿದ್ದರು. ರಸ್ತೆ ಬದಿಯ ಸೈಕಲ್ ಅಂಗಡಿಯಿಂದ ಸಿಗರೇಟ್ ತೆಗೆದುಕೊಂಡು ಅಲ್ಲೇ ನಿಂತು ಸೇದುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಪ್ರತೀಕ್ ಕಾರಿನಿಂದ ಇಳಿಯದೇ, ಸಂಜಯ್ಗೆ ಸಿಗರೇಟ್ ತಂದುಕೊಡುವಂತೆ ಹೇಳಿದ್ದ. ಆಗ ಇವರಿಬ್ಬರು ಬೇಕಾದ್ರೆ ನೀನೇ ತಾ ಎಂದಿದ್ದರು. ಇದರಿಂದ ಕೋಪಗೊಂಡ ಸಂಜಯ್ ಮತ್ತು ಕಾರ್ತಿಕ್ ಕಾರಿನಲ್ಲಿದ್ದ ಪ್ರತೀಕ್ ನಡುವೆ ಗಲಾಟೆ ನಡೆದಿತ್ತು.
ಗಲಾಟೆ ಜೋರಾಗುತ್ತಿದ್ದಂತೆ ಅಂಗಡಿಯವರು ಬಿಡಿಸಿ ಕಳುಹಿಸಿದ್ದರು. ಕೋಪಗೊಂಡ ಪ್ರತೀಕ್ ಕಾರಿನಲ್ಲಿ ಮುಂದೆ ಹೋಗಿ ರಸ್ತೆ ಪಕ್ಕದಲ್ಲೇ ಸ್ವಲ್ಪ ಹೊತ್ತು ನಿಂತುಕೊಂಡಿದ್ದ. ಸಂಜಯ್ ಮತ್ತು ಕಾರ್ತಿಕ್ ಸಿಗರೇಟ್ ಸೇದಿ ಇಬ್ಬರೂ ಬೈಕ್ನಲ್ಲಿ ಮುಂದೆ ಬರುತ್ತಿದ್ದಂತೆ ಹಿಂದಿನಿಂದ ವೇಗವಾಗಿ ಬಂದ ಪ್ರತೀಕ್ ಇಬ್ಬರು ಹೋಗುತ್ತಿದ್ದ ಬೈಕ್ಗೆ ಢಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಸಂಜಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕಾರ್ತಿಕ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರಂಭದಲ್ಲಿ ಇದು ಅಪಘಾತ ಎಂದು ತಿಳಿದಿದ್ದ ಸುಬ್ರಮಣ್ಯಪುರ ಪೊಲೀಸಸರು ಸ್ಥಳದಲ್ಲಿದ್ದ ಸಿಸಿಟಿವಿ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಬಯಲಿಗೆ ಬಂದಿದ್ದು, ಆರೋಪಿ ಪ್ರತೀಕ್ನನ್ನು ಬಂಧಿಸಿದ್ದಾರೆ.