ಬದೌನ್: ಹಸೆಮಣೆ ಏರುವ ಸಂತೋಷದಲ್ಲಿದ್ದ ವಧು ಅರಶಿನ ಶಾಸ್ತ್ರದ ವೇಳೆ ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಇಸ್ಲಾಂನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ನೂರ್ಪುರ್ ಪಿನೋನಿ ಗ್ರಾಮದಲ್ಲಿ ಮೇ4ರಂದು ರಾತ್ರಿ ಸಂಭವಿಸಿದೆ.
ಅರಿಶಿನ ಶಾಸ್ತ್ರದ ಸಮಾರಂಭದಲ್ಲಿ ನೃತ್ಯ ಮಾಡುತ್ತಿದ್ದ ವಧು ಬಾತ್ ರೂಂಗೆ ಹೋಗಿ ವಾಪಸ್ ಬಂದು ಡ್ಯಾನ್ಸ್ ಮಾಡುವಾಗ ನಿಧನಳಾಗಿದ್ದಾಳೆ. ಸಮಾರಂಭದ ಸಮಯದಲ್ಲಿ ಯುವತಿ ನೃತ್ಯ ಮಾಡುತ್ತಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ.
ಘಟನೆಯ ವಿವರ: ವಧು ಮತ್ತು ಆಕೆಯ ಕುಟುಂಬವು ತಮ್ಮ ಜೀವನದ ಅತ್ಯಂತ ಸಂತೋಷದ ದಿನಗಳಲ್ಲಿ ಒಂದಕ್ಕೆ ತಯಾರಿ ನಡೆಸುತ್ತಿದ್ದರು. ಹಳದಿ ಸಮಾರಂಭವು ಆಗಷ್ಟೇ ಪೂರ್ಣಗೊಂಡಿತ್ತು. ಮನೆ ತುಂಬ ನಗು, ಸಂಗೀತ ಮತ್ತು ನೃತ್ಯ ತುಂಬಿತ್ತು. ಅರಿಶಿನ ಶಾಸ್ತ್ರದ ಆಚರಣೆಯ ನಂತರ ಆ ವಧು ತನ್ನ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಂತೋಷದಿಂದ ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಳು. ಅಲ್ಲಿದ್ದವರು ಸಹಾಯ ಮಾಡಲು ತಕ್ಷಣ ಪ್ರಯತ್ನಿಸಿದರೂ ಯುವತಿಯನ್ನು ಉಳಿಸಲಾಗಲಿಲ್ಲ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಆಕೆಗೆ ಹೃದಯಾಘಾತವಾಗಿರಬಹುದು ಎಂದು ವೈದ್ಯರು ಹೇಳಿದ್ದಾರೆ.
ವರನ ಮದುವೆ ಮೆರವಣಿಗೆ (ಬರಾತ್) ನಿನ್ನೆ ಬೆಳಿಗ್ಗೆ ಬರಬೇಕಿತ್ತು. ಮದುವೆಗೆ ವಧುವನ್ನು ಸುಂದರವಾಗಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ಕಳುಹಿಸುವ ಬದಲು, ಆಕೆಯ ಶವವನ್ನು ಚಟ್ಟದ ಮೇಲೆ ಇಟ್ಟು ಅಂತ್ಯಕ್ರಿಯೆಗಾಗಿ ಹೊತ್ತೊಯ್ಯಲಾಯಿತು. ವಧುವಿನ ಹಠಾತ್ ಸಾವು ಆಕೆಯ ಕುಟುಂಬವನ್ನು ಆಘಾತಗೊಳಿಸಿದೆ. ಆಕೆಯ ತಾಯಿ ಆಘಾತ ಮತ್ತು ದುಃಖದಿಂದ ಪ್ರಜ್ಞೆ ಕಳೆದುಕೊಂಡರು. ಮದುವೆಗೆ ಹಾಜರಾಗಲು ರೇಷ್ಮೆ ಉಡುಪಿನಲ್ಲಿ ಆಗಮಿಸಿದ್ದ ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಅಳುತ್ತಾ ನಡೆದರು. ಆಕೆಯ ಕೈ ಹಿಡಿಯಬೇಕಾಗಿದ್ದ ವರ ಒಂಟಿಯಾಗಿ ಕೂತು ಬಿಕ್ಕಿ ಬಿಕ್ಕಿ ಅಳುವ ದೃಶ್ಯ ಮನಕಲಕುವಂತಿತ್ತು.
ಸ್ಥಳೀಯ ನಿವಾಸಿಯೊಬ್ಬರು, “ಆ ಹುಡುಗಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಳು. ಅವಳಿಗೆ ಯಾವುದೇ ಕಾಯಿಲೆ ಇರಲಿಲ್ಲ. ಆಕೆಗೆ ಇಂತಹ ದುರಂತ ಸಾವು ಸಂಭವಿಸಬಹುದು ಎಂದು ನಾವು ಎಂದಿಗೂ ಊಹಿಸಿರಲಿಲ್ಲ” ಎಂದು ಹೇಳಿದ್ದಾರೆ.