
ಮಂಗಳೂರು: ಇತ್ತೀಚೆಗೆ ಅಗಲಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಬಿಜೆಪಿ ಮುಖಂಡರಾದ ಶ್ರೀ ಸತೀಶ್ ಪ್ರಭು ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಕಳೆದ ಶನಿವಾರ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ನಡೆಯಿತು.


ಶಾಸಕ ಡಿ.ವೇದವ್ಯಾಸ ಕಾಮತ್ ರವರು ಮಾತನಾಡಿ, ಸತೀಶ್ ಪ್ರಭು ಅವರ ಉತ್ತಮ ಸಂಘಟಕರಾಗಿ, ಪಕ್ಷದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿಯೂ ಅವಿರತವಾಗಿ ಶ್ರಮಿಸಿ, ಉತ್ತಮ ಕೊಡುಗೆ ನೀಡಿದ್ದಾರೆ. ಅವರಿಂದ ಇನ್ನಷ್ಟು ಸೇವೆ ಸಮಾಜಕ್ಕೆ, ನಾಡಿಗೆ ಅವಶ್ಯವಾಗಿತ್ತು. ಅವರ ಸಾಧನೆ ಎಂದಿಗೂ ಅವಿಸ್ಮರಣೀಯ ಎಂದರು.

ಬಾಲ್ಯದಿಂದಲೇ ಸಂಘದ ಪ್ರೇರಣೆಯಿಂದ ಬದುಕನ್ನು ಸಮಾಜಕ್ಕಾಗಿ ಅರ್ಪಿಸಿದ್ದ, ರಾಷ್ಟ್ರಧರ್ಮ, ಸಾಮಾಜಿಕ ರಂಗ, ಧಾರ್ಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿ ಸಮಾಜ ಸೇವೆ ಸಲ್ಲಿಸಿ, ಭಾರತೀಯ ಜನತಾ ಪಾರ್ಟಿಯ ಮಂಡಲ ಹಾಗೂ ಜಿಲ್ಲಾ ಮಟ್ಟದ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು, ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ವಿಶ್ವಸ್ಥರೂ ಆಗಿದ್ದರು. ಅಲ್ಲದೇ ಸಂಘನಿಕೇತನ ಶ್ರೀ ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಸತೀಶ್ ಪ್ರಭು ಅವರು ಬದುಕಿದ ರೀತಿಯನ್ನು ಮೆಲುಕು ಹಾಕಿದ ಗಣ್ಯರು ಪುಷ್ಪನಮನದೊಂದಿಗೆ ನುಡಿನಮನ ಸಲ್ಲಿಸಿದರು. ಆರೆಸ್ಸೆಸ್ ಪ್ರಾಂತ ಸಹ ಕಾರ್ಯವಾಹ, ಹೊಸದಿಗಂತ ಪತ್ರಿಕೆಯ ಸಿಇಒ ಪಿ.ಎಸ್.ಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಉದ್ಯಮಿ ಗುರುದತ್ ಕಾಮತ್ ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಸಿ.ಎ ಜಗನ್ನಾಥ ಕಾಮತ್ ಸೇರಿದಂತೆ ಅನೇಕರು ಶ್ರದ್ದಾಂಜಲಿ ಸಲ್ಲಿಸಿದರು.
