ಪಹಲ್ಗಾಂ ಉಗ್ರ ದಾಳಿ, ಸುಹಾಸ್‌ ಶೆಟ್ಟಿ ಹ*ತ್ಯೆ ಖಂಡಿಸಿ ಚಿಕ್ಕಮಗಳೂರು ಬಂದ್: 10 ಮಂದಿ ವಶಕ್ಕೆ

ಚಿಕ್ಕಮಗಳೂರು: ಪಹಲ್ಗಾಮ್ ಉಗ್ರರ ದಾಳಿ ಮತ್ತು ಮಂಗಳೂರಿನ ‌ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತಿ ಬಜರಂಗದಳ ಮುಖಂಡರು ಚಿಕ್ಕಮಗಳೂರು ಬಂದ್ ಕರೆ ನೀಡಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿ, ಮುಂಗಟ್ಟುಗಳು ಬಂದ್ ಆಗಿವೆ. ಚಿಕ್ಕಮಗಳೂರಿನ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆಗೆ ಮುಂದಾದ 10ಕ್ಕೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಎಂ.ಜಿ.ರಸ್ತೆ, ಮಾರ್ಕೇಟ್ ರಸ್ತೆ, ಐ.ಜಿ.ರಸ್ತೆಗಳಲ್ಲಿ 10 ಗಂಟೆ ಬಳಿಕವೂ ಅಂಗಡಿಗಳನ್ನು ತೆರೆಯದೆ ವರ್ತಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಬಡಾವಣೆಗಳಲ್ಲಿ ಅಂಗಡಿಗಳು ತೆರೆದಿವೆ. ಜಿಲ್ಲಾಡಳಿತದ ವಿರೋಧದ ನಡುವೆಯೂ ಸಂಘ ಪರಿವಾರದ ವತಿಯಿಂದ ಸ್ವಯಂಪ್ರೇರಿತ ಬಂದ್ ನಡೆಯುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸೇರಿದಂತೆ ಗಡಿ ಪ್ರದೇಶಗಳು ಸಂಪೂರ್ಣ ಸ್ಥಬ್ಧವಾಗಿದ್ದು, ಅಂಗಡಿ-ಮುಂಗಟ್ಟುಗಳು ತೆರೆಯದೇ ಉಳಿದಿವೆ. ಬಂದ್‌ಗೆ ಗ್ರಾಮೀಣ ಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸ್ಥಳೀಯ ಸಂಘಟನೆಗಳು ಕಾನೂನು ಸುವ್ಯವಸ್ಥೆ ಬದಿಗೊತ್ತಿ ಬಂದ್ ಆಯೋಜಿಸಿದ್ದು, ಪರಿಸ್ಥಿತಿ ನಿಗಾವಹಿಸುವಲ್ಲಿ ಪೊಲೀಸರು ಮುತುವರ್ಜಿತ ಕ್ರಮ ಕೈಗೊಂಡಿದ್ದಾರೆ.

ಮೂಡಿಗೆರೆ, ಕೊಟ್ಟಿಗೆಹಾರ, ಕೊಪ್ಪ, ಶೃಂಗೇರಿ, ಕಳಸ, ಎನ್.ಆರ್.ಪುರದಲ್ಲಿ ಅಂಗಡಿಗಳು ಬಂದ್ ಆಗಿವೆ‌. ಬಸ್, ಆಟೊರಿಕ್ಷಾ ಸೇರಿ ವಾಹನ ಸಂಚಾರ ಎಲ್ಲೆಡೆ ಸಹಜ ಸ್ಥಿತಿಯಲ್ಲಿದೆ‌. ಸರ್ಕಾರಿ ಕಚೇರಿಗಳು, ಕಾಲೇಜುಗಳು ಎಂದಿನಂತೆ ತೆರೆದಿವೆ. ಕಡೂರು, ಅಜ್ಜಂಪುರ, ತರೀಕೆರೆಯಲ್ಲಿ ಬಂದ್‌ಗೆ ಬೆಂಬಲ ದೊರೆತಿಲ್ಲ. ಅಂಗಡಿಗಳು ಎಂದಿನಂತೆ ತೆರೆದಿವೆ.

ಬಲವಂತದಿಂದ ಬಂದ್ ನಡೆಸಲು ಮುಂದಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

error: Content is protected !!