ಮಂಗಳೂರು: ಗೂಡ್ಸ್ ವಾಹನದಲ್ಲಿ ಮೀನು ಸಾಗಾಟದ ನೆಪದಲ್ಲಿ ಅಕ್ರಮವಾಗಿ ಬೆಳಗಾವಿಯಿಂದ ಮಂಗಳೂರಿಗೆ ಸಾಗಿಸುತ್ತಿದ್ದ 1 ಟನ್ ಗೋಮಾಂಸವನ್ನು ಬಜರಂಗದಳದ ಕಾರ್ಯಕರ್ತರು ಶನಿವಾರ ರಾತ್ರಿ ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆ ಮೂಲಕ ಗೂಡ್ಸ್ ವಾಹನದಲ್ಲಿ ಬೆಳಗಾವಿಯಿಂದ ಮಂಗಳೂರಿಗೆ ಗೋಮಾಂಸ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು, ನರೇಂದ್ರ ಬೈಪಾಸ್ನಿಂದ ವಾಹನದ ಬೆನ್ನು ಹತ್ತಿದರು. ಆದರೆ, ವಾಹನದ ಚಾಲಕ ಅತಿ ವೇಗವಾಗಿ ವಾಹನ ಚಲಾಯಿಸಿ, ಮನಸೂರ ರಸ್ತೆವರೆಗೂ ಆಗಮಿಸಿ, ಕೊನೆಗೆ ಭಯದಿಂದ ವಾಹನವನ್ನು ರಸ್ತೆ ಪಕ್ಕದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಇಡೀ ವಾಹನದಲ್ಲಿ ಅಕ್ರಮ ಗೋಮಾಂಸ ತುಂಬಿಸಲಾಗಿತ್ತು. ತಪಾಸಣೆ ಸಮಯದಲ್ಲಿ ಗೊತ್ತಾಗದಿರಲಿ ಎಂಬ ಕಾರಣಕ್ಕೆ ಮುಂದಿನ ಒಂದೆರಡು ಸಾಲಿನಲ್ಲಿ ಮೀನುಗಳನ್ನು ಇಡಲಾಗಿತ್ತು. ತಕ್ಷಣವೇ ಈ ಬಗ್ಗೆ ಬಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ವಾಹನ ಹಾಗೂ ಒಂದು ಟನ್ ಗೋಮಾಂಸವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.