
ಮಂಗಳೂರು ಧರ್ಮಕ್ಷೇತ್ರದ ಅತ್ಯಂತ ಬಲಿಷ್ಠ ಹಾಗೂ ಪ್ರಭಾವಿ ಸಂಘಟನೆಯಾದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.)ಇದರ ಕೇಂದ್ರೀಯ ಸಮಿತಿಯ ನೂತನ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಕಗೊಂಡಿರುವ ವಂದನೀಯ ಫಾದರ್ ಐವನ್ ಮೈಕಲ್ ರೊಡ್ರಿಗಸ್ ಅವರನ್ನು ಇಂದು ಜೂನ್ 14ರಂದು ಭಾನುವಾರ ಅಧಿಕೃತವಾಗಿ ಮಂಗಳೂರು ಧರ್ಮಾಧ್ಯಕ್ಷರ ನಿವಾಸದ ಸಭಾಂಗಣದಲ್ಲಿ ಅಭಿನಂದಿಸಲಾಯಿತು.
ಇಂದು ನಡೆದ ಕೇಂದ್ರೀಯ ಕಾರ್ಯಕಾರಿ ಸಮಿತಿಯ ಪ್ರಮುಖ ಸಭೆಯಲ್ಲಿ, ಕಥೊಲಿಕ್ ಸಭಾ ಕೇಂದ್ರೀಯ ಸಮಿತಿಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಅವರು ನೂತನ ನಿರ್ದೇಶಕರಿಗೆ ಹೂಗುಚ್ಛ ನೀಡಿ, ಸಂಘಟನೆಯ ಪರವಾಗಿ ಆತ್ಮೀಯವಾಗಿ ಸ್ವಾಗತಿಸಿ, ಶುಭ ಹಾರೈಸಿದರು.
ಈ ಗೌರವಾನ್ವಿತ ಮತ್ತು ಸೌಹಾರ್ದಯುತ ಸಂದರ್ಭದಲ್ಲಿ ಸಂಘಟನೆಯ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದು ಸಾಕ್ಷಿಯಾದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ ದೆರೆಬೈಲ್, ಕೋಶಾಧಿಕಾರಿ ಫ್ರಾನ್ಸಿಸ್ ಮೊಂತೇರೊ ಮರಿಯಾಶ್ರಮ್, ಪ್ರಥಮ ಉಪಾಧ್ಯಕ್ಷ ಸ್ಟೀವನ್ ರೊಡ್ರಿಗಸ್, ದ್ವಿತೀಯ ಉಪಾಧ್ಯಕ್ಷ ಆಲ್ಬರ್ಟ್ ಸುನಿಲ್ ಮೊನಿಸ್, ಸಹ ಕಾರ್ಯದರ್ಶಿ ಟ್ರೆಸ್ಸಿ ರೊಡ್ರಿಗಸ್ ಅಮ್ಮೆಂಬಳ ಹಾಗೂ ಸಹ ಕೋಶಾಧಿಕಾರಿ ಸ್ಟ್ಯಾನಿ ಮಿರಾಂದ ನಿರುಡೆ ಉಪಸ್ಥಿತರಿದ್ದರು.
ಇವರೊಂದಿಗೆ ಸಂಘಟನೆಯ ಮಾಜಿ ಅಧ್ಯಕ್ಷರುಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಭಾಗವಹಿಸಿ, ನೂತನ ನಿರ್ದೇಶಕರ ನೇತೃತ್ವದಲ್ಲಿ ಸಂಘಟನೆಯು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿ ಎಂದು ಹಾರೈಸಿದರು.
