
ಬೆಂಗಳೂರು: ತಡರಾತ್ರಿ ಪಿಜಿ ಗೆ ನುಗ್ಗಿದ ಖದೀಮರು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಚಾರ್ಜಿಂಗ್ಗೆ ಇಟ್ಟಿದ್ದ 8 ದುಬಾರಿ ಮೊಬೈಲ್ ಫೋನ್ಗಳನ್ನು ಕದ್ದು ಪರಾರಿಯಾಗಿರುವ ಘಟನೆ ಹೊಸಪಾಳ್ಯದಲ್ಲಿ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರನ್ನು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ.

ಹೊಸಪಾಳ್ಯದ ಕೂಡ್ಲು ಮುಖ್ಯ ರಸ್ತೆಯಲ್ಲಿರುವ ಸಾಯಿ ಆರಾಧ್ಯ ಲಕ್ಸುರಿ ಪಿಜಿ ಫಾರ್ ಜೆಂಟ್ಸ್ನಲ್ಲಿ ವಾಸವಾಗಿರುವ 27 ವರ್ಷದ ಕ್ಯಾಬ್ ಚಾಲಕ ದರ್ಶನ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೇ 28ರ ರಾತ್ರಿ 11 ಗಂಟೆಗೆ ಕೆಲಸ ಮುಗಿಸಿ ಬಂದಿದ್ದ ದರ್ಶನ್, ತಮ್ಮ ಎರಡು ಮೊಬೈಲ್ ಫೋನ್ಗಳನ್ನು ಚಾರ್ಜಿಂಗ್ಗೆ ಇಟ್ಟು ಮಲಗಿದ್ದರು. ಅವರ ಕೊಠಡಿಯ ಇತರ ಸ್ನೇಹಿತರು ಹಾಗೂ ಪಕ್ಕದ ರೂಮ್ನವರೂ ಸಹ ಫೋನ್ಗಳನ್ನು ಚಾರ್ಜ್ಗೆ ಇಟ್ಟಿದ್ದರು. ಮೇ 29ರ ಮುಂಜಾನೆ 6 ಗಂಟೆಗೆ ದರ್ಶನ್ ಎದ್ದು ನೋಡಿದಾಗ ಅವರ ಫೋನ್ಗಳು ನಾಪತ್ತೆಯಾಗಿತ್ತು. ತಕ್ಷಣವೇ ಪಿಜಿಯ ಉಳಿದ ರೂಮ್ಗಳಲ್ಲಿ ಪರಿಶೀಲಿಸಿದಾಗ ಒಟ್ಟು 8 ಫೋನ್ಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
ಈ ಪಿಜಿಯಲ್ಲಿ ಯಾವುದೇ ಸೆಕ್ಯೂರಿಟಿ ಗಾರ್ಡ್ ಇರಲಿಲ್ಲ ಎನ್ನಲಾಗಿದೆ. ಕಳ್ಳತನದ ಬಳಿಕ ಪೊಲೀಸರು ಪಿಜಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಇಬ್ಬರು ಕಳ್ಳರು ಮಧ್ಯರಾತ್ರಿ ಕಟ್ಟಡದೊಳಗೆ ನುಗ್ಗಿ, ಫೋನ್ಗಳನ್ನು ಕದ್ದು ಯಾರಿಗೂ ತಿಳಿಯದಂತೆ ಎಸ್ಕೇಪ್ ಆಗಿರುವುದು ಸೆರೆಯಾಗಿದೆ. ಪಿಜಿ ನಿವಾಸಿಗಳು ರಾತ್ರಿ ವೇಳೆ ತಮ್ಮ ಕೊಠಡಿಯ ಬಾಗಿಲುಗಳನ್ನು ಲಾಕ್ ಮಾಡದೇ ಹಾಗೇ ಮಲಗಿದ್ದರಿಂದ ಕಳ್ಳರಿಗೆ ಕಳವು ಮಾಡಲು ಸುಲಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಳ್ಳರನ್ನು ಹಿಡಿಯಲು ಪೊಲೀಸರು ಮುಂದಾಗಿದ್ದಾರೆ.