
ಮಡಿಕೇರಿ: ದುಬಾರೆ ಸಾಕಾನೆ ಶಿಬಿರದಲ್ಲಿ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಸೋಮವಾರ(ಮೇ 18) ನಡೆದ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೇ ಇಂದು(ಮೇ 19) ಸಾವನ್ನಪ್ಪಿದೆ.

ಸೋಮವಾರ ಕಂಜನ್ ಆನೆ ಹಾಗೂ ಮಾರ್ತಾಂಡ ಆನೆ ಕಾದಾಟದಲ್ಲಿ ಮಹಿಳೆಯೊಬ್ಬರು ಬಲಿಯಾಗಿದ್ದರು. ಕಾದಾಟದಲ್ಲಿ ಕಂಜನ್ ಆನೆ ಮಾರ್ತಾಂಡ ಆನೆಯ ಹೊಟ್ಟೆ, ಕಿವಿ ಹಾಗೂ ಇತರೆ ಭಾಗಗಳಿಗೆ ತಿವಿದು ಗಾಯಗೊಳಿಸಿತ್ತು. ತೀವ್ರ ಗಾಯಗೊಂಡಿದ್ದ ಮಾರ್ತಾಂಡ ಆನೆಗೆ ದುಬಾರೆ ಸಾಕಾನೆ ಶಿಬಿರದಲ್ಲಿ ಡಾ.ಮುಜಿಭ್ ಹಾಗೂ ಚಿಟ್ಟಿಯಪ್ಪ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮಾರ್ತಾಂಡ ಆನೆ ಮೃತಪಟ್ಟಿದೆ.

ಆನೆಗಳ ಕಾದಾಟದಲ್ಲಿ ಮಹಿಳೆ ಬಲಿ ಪ್ರಕರಣ ಸಂಬಂಧ ಇಂದು ದುಬಾರೆ ಸಾಕಾನೆ ಶಿಬಿರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮುಂದಿನ ಆದೇಶದವರೆಗೂ ದುಬಾರೆ ಬಂದ್ ಆಗಲಿದೆ.
