
ಮಂಗಳೂರು: ಎನ್ಆರ್ಜೆ ಕರ್ನಾಟಕ ಸೀನಿಯರ್ ಸ್ಟೇಟ್ ಲೆವೆಲ್ ಸ್ವಿಮ್ಮಿಂಗ್ ಮೀಟ್–2026ರಲ್ಲಿ ಪ್ರತಿಭಾವಂತ ಈಜುಗಾರ ಚಿಂತನ್ ಎಸ್ ಶೆಟ್ಟಿ ಅತ್ಯುತ್ತಮ ಸಾಧನೆ ಮಾಡಿದ್ದು, ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಗೆದ್ದು ರಾಜ್ಯದ ಗಮನ ಸೆಳೆದಿದ್ದಾರೆ.

ಚಿಂತನ್ ಶೆಟ್ಟಿ ಅವರು 50 ಮೀ. ಮತ್ತು 100 ಮೀ. ಬಟರ್ಫ್ಲೈ ವಿಭಾಗದಲ್ಲಿ ಚಿನ್ನದ ಪದಕ, 200 ಮೀ. ಇಂಡಿವಿಜುವಲ್ ಮೆಡ್ಲೆಯಲ್ಲಿ ಬೆಳ್ಳಿ ಪದಕ ಹಾಗೂ 100 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಕಂಚಿನ ಪದಕ ಪಡೆದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಸಾಧನೆಯ ಹಿನ್ನೆಲೆಯಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಲು ನಡೆಯಲಿರುವ 79ನೇ ಸೀನಿಯರ್ ನ್ಯಾಷನಲ್ ಅಕ್ವಾಟಿಕ್ ಚಾಂಪಿಯನ್ಶಿಪ್–2026ಕ್ಕೆ ಆಯ್ಕೆಯಾಗಿದ್ದಾರೆ. ಈ ರಾಷ್ಟ್ರೀಯ ಮಟ್ಟದ ಸ್ಪರ್ಧೆ ಜೂನ್ 16ರಿಂದ ಗುಜರಾತ್ನ ಅಹಮದಾಬಾದ್ನ ವೀರ್ ಸಾವರ್ಕರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ. ಪ್ರಸ್ತುತ ಚಿಂತನ್ ಅವರು ಮಂಗಳೂರಿನ ಶ್ರೀ ರಾಮಕೃಷ್ಣ ಕಾಲೇಜು ಬಂಟ್ಸ್ ಹಾಸ್ಟೆಲ್ನ ವಿದ್ಯಾರ್ಥಿಯಾಗಿದ್ದು, ಬೆಂಗಳೂರಿನ ಲಕ್ಷ್ಯಾನ್ ಅಕಾಡೆಮಿ ಆಫ್ ಸ್ಪೋರ್ಟ್ಸ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಚಿಂತನ್ ಅವರ ಈ ಸಾಧನೆಗೆ ಕ್ರೀಡಾಭಿಮಾನಿಗಳು, ತರಬೇತುದಾರರು ಹಾಗೂ ಶಿಕ್ಷಣ ಸಂಸ್ಥೆಯವರು ಅಭಿನಂದನೆ ಸಲ್ಲಿಸಿದ್ದಾರೆ.