ಮಂಗಳೂರು: ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣರ ಎಸೋಸಿಯೇಶನ್ ಮತ್ತು ತುಳುನಾಡು ಎಜುಕೇಶನಲ್ ಟ್ರಸ್ಟ್ ವತಿಯಿಂದ ನಗರದ ಕೊಡಿಯಾಲ್ಬೈಲ್ನಲ್ಲಿ ಮೇ 10ರಿಂದ ಮೇ 16ರವರೆಗೆ ‘ಶ್ರೀಮದ್ ಭಾಗವತ ಸಪ್ತಾಹ ಪ್ರವಚನ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷರಾದ ಡಾ. ಎಂ. ಬಿ. ಪುರಾಣಿಕ್ ಅವರು ತಿಳಿಸಿದರು.

ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಡಿಯಾಲ್ಬೈಲ್ನ ಎಸ್.ಕೆ.ಡಿ.ಬಿ. ಆವರಣದಲ್ಲಿರುವ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ಈ ಪ್ರವಚನ ನಡೆಯಲಿದೆ. ಹುಬ್ಬಳ್ಳಿಯ ಪ್ರಸಿದ್ಧ ಪ್ರವಚನಕಾರರಾದ ಶ್ರೀ ಡಾ| ಶ್ರೀಹರಿ ಆಚಾರ್ಯ ವಾಲೈಕರ್ ಅವರು ಏಳು ದಿನಗಳ ಕಾಲ ಭಾಗವತದ ಸಾರವನ್ನು ಭಕ್ತರಿಗೆ ಉಣಬಡಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರತಿದಿನ ಸಂಜೆ 5.30ರಿಂದ 7.30ರವರೆಗೆ ಪ್ರವಚನ ಕಾರ್ಯಕ್ರಮ ಜರುಗಲಿದೆ. ಇದರ ಜೊತೆಗೆ ವಿಶೇಷವಾಗಿ ಪ್ರತಿದಿನ ಸಂಜೆ 5 ಗಂಟೆಯಿಂದ ವಿವಿಧ ಮಾತೃಮಂಡಳಿಯವರಿಂದ ‘ಶ್ರೀ ಭಗವನ್ನಾಮ ಸಂಕೀರ್ತನೆ’ ಕಾರ್ಯಕ್ರಮ ನಡೆಯಲಿದೆ. ಈ ಸಪ್ತಾಹದ ಅವಧಿಯಲ್ಲಿ ವಿವಿಧ ಮಠಾಧೀಶರು ಆಗಮಿಸಿ ಆಶೀರ್ವಚನ ನೀಡಲಿದ್ದಾರೆ. ಈ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಆಸ್ತಿಕ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಜ್ಞಾನದ ಲಾಭ ಪಡೆಯುವುದರ ಜೊತೆಗೆ ಚಂದಾದಾರರಾಗಿ ಸಹಕರಿಸಬೇಕೆಂದು ಎಂಬಿ ಪುರಾಣಿಕ್ ವಿನಂತಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಎಸೋಸಿಯೇಶನ್ನ ಅಧ್ಯಕ್ಷರಾದ ಬಿ. ಸುಬ್ರಹ್ಮಣ್ಯ ರಾವ್, ಕಾರ್ಯದರ್ಶಿ ವಿವೇಶ್ ತಂತ್ರಿ, ಕೋಶಾಧಿಕಾರಿ ಸುಧಾಕರ್ ರಾವ್ ಪೇಜಾವರ ಉಪಸ್ಥಿತರಿದ್ದರು.