ರಾಜಕಾಲುವೆ ಉಕ್ಕಿ ಹರಿದು ನಾಗರಿಕರ ಬದುಕು ಹೈರಾಣು!
2021 ರಿಂದ ಮನವಿ ನೀಡಿದ್ರೂ ಪ್ರಯೋಜನವಾಗಿಲ್ಲ; ಎಚ್ಚೆತ್ತುಕೊಳ್ಳದ ಮನಪಾ!
ಸುರತ್ಕಲ್: ಮಂಗಳೂರು ಮಹಾನಗರ ಪಾಲಿಕೆಯ 7ನೇ ವಾರ್ಡ್ ವ್ಯಾಪ್ತಿಯ ಇಡ್ಯಾ ಗ್ರಾಮದ ಸುಭಾಷಿತ ನಗರದ ನಿವಾಸಿಗಳು ಪ್ರತಿ ಮಳೆಗಾಲದಲ್ಲೂ ಪ್ರವಾಹದ ಭೀತಿಯಲ್ಲಿ ಬದುಕುವಂತಾಗಿದೆ. ಇಲ್ಲಿನ ರಾಜಕಾಲುವೆಯ ಅವೈಜ್ಞಾನಿಕ ಕಾಮಗಾರಿ ಹಾಗೂ ತಡೆಗೋಡೆಯ ಕೊರತೆಯಿಂದಾಗಿ ಜನಸಾಮಾನ್ಯರು ಕಷ್ಟ-ನಷ್ಟಗಳನ್ನು ಅನುಭವಿಸುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ.




ಸುಭಾಷಿತ ನಗರವು ತಗ್ಗು ಪ್ರದೇಶ ಹಾಗೂ ಸಮುದ್ರ ಮಟ್ಟಕ್ಕೆ ಸಮನಾಗಿರುವ ಕಾರಣ, ಮಳೆಗಾಲದಲ್ಲಿ ರಾಜಕಾಲುವೆಯ ನೀರು ಸರಾಗವಾಗಿ ಹರಿಯದೆ ಉಕ್ಕಿ ಹರಿಯುತ್ತಿದೆ. ಕಾಲುವೆಗೆ ಸರಿಯಾದ ತಡೆಗೋಡೆ ಇಲ್ಲದಿರುವುದು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. ಕೆಲವು ಕಡೆಗಳಲ್ಲಿ ತಡೆಗೋಡೆ ನಿರ್ಮಿಸಲಾಗಿದ್ದರೂ, ಅವುಗಳ ಎತ್ತರ ತೀರಾ ಕಡಿಮೆಯಿರುವುದು ಪ್ರವಾಹ ತಡೆಯುವಲ್ಲಿ ವಿಫಲವಾಗಿವೆ.

ಅಧಿಕಾರಿಗಳ ಮೌನಕ್ಕೆ ನಾಗರಿಕರ ಆಕ್ರೋಶ:
ಈ ಕುರಿತು 2021 ರಿಂದಲೂ ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಮುಖಾಂತರ ಜನಪ್ರತಿನಿಧಿಗಳಿಗೆ ಮತ್ತು ಮನಪಾ ಅಧಿಕಾರಿಗಳಿಗೆ ನಿರಂತರವಾಗಿ ಮನವಿ ಸಲ್ಲಿಸುತ್ತಾ ಬರಲಾಗಿದೆ. ಆದರೆ, ಈವರೆಗೆ ಯಾವುದೇ ವೈಜ್ಞಾನಿಕ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ನಾಗರಿಕರ ದೂರು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಿಸಬೇಕೆಂದು ಅಸೋಸಿಯೇಷನ್ ಅಧ್ಯಕ್ಷರಾದ ರಮೇಶ್ ಶೆಟ್ಟಿ ಅವರು ಒತ್ತಾಯಿಸಿದ್ದಾರೆ.
