ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ನಿಯಮ ಉಲ್ಲಂಘಿಸಿ ಮತಗಟ್ಟೆಯೊಳಗೆ ಕ್ಯಾಮೆರಾ ಹೊಂದಿರುವ ಸ್ಮಾರ್ಟ್ ಗ್ಲಾಸ್ ಧರಿಸಿ ಬಂದಿದ್ದ ಯುಡಿಎಫ್ (UDF) ಅಭ್ಯರ್ಥಿಯ ಮುಖ್ಯ ಚುನಾವಣಾ ಏಜೆಂಟ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಉದುಮ ವಿಧಾನಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಕೆ. ನೀಲಕಂಠನ್ ಅವರ ಮುಖ್ಯ ಚುನಾವಣಾ ಏಜೆಂಟ್ ಆಗಿರುವ ಬಿ.ಎಂ. ಜಮಾಲ್ (59) ಎಂಬವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಅವರು ಬೇಕಲ ಇಸ್ಲಾಮಿಯಾ ಎಲ್ಪಿ ಶಾಲೆಯ ಮತದಾನ ಕೇಂದ್ರಕ್ಕೆ ಕ್ಯಾಮೆರಾ ಮತ್ತು ಬ್ಲೂಟೂತ್ ಸೌಲಭ್ಯವಿರುವ ಮೆಟಾ ಸ್ಮಾರ್ಟ್ ಗ್ಲಾಸ್ ಧರಿಸಿ ಪ್ರವೇಶಿಸಿದ್ದರು.
ಮತಗಟ್ಟೆಯೊಳಗೆ ಅಶಾಂತಿ ಉಂಟುಮಾಡಲು ಯತ್ನಿಸಿದ ಆರೋಪದ ಮೇಲೆ ಭಾರತೀಯ ನ್ಯಾಯ ಸುರಕ್ಷಾ ಸಂಹಿತೆಯ ಸೆಕ್ಷನ್ 170 ರ ಅಡಿಯಲ್ಲಿ ಬೇಕಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚುನಾವಣಾ ನಿಯಮದಂತೆ ಮತಗಟ್ಟೆಯೊಳಗೆ ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ರೆಕಾರ್ಡಿಂಗ್ ಸಾಧನಗಳನ್ನು ಕೊಂಡೊಯ್ಯುವುದು ನಿಷೇಧಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಡ್ವೋಕೇಟ್ ಜಮಾಲ್, “ಈ ಸ್ಮಾರ್ಟ್ ಗ್ಲಾಸ್ ಅನ್ನು ನಾನು ನಿಯಮಿತವಾಗಿ ಬಳಸುತ್ತೇನೆ. ಅಧಿಕಾರಿಗಳು ಅದನ್ನು ತೆಗೆಯಲು ಸೂಚಿಸಿದ ಕೂಡಲೇ ನಾನು ಅದನ್ನು ತೆಗೆದಿರಿಸಿದ್ದೇನೆ” ಎಂದು ಹೇಳಿದ್ದಾರೆ.
