ಹಡೆದ ಮಗಳೇ ಮಗನ ರೋಗಕ್ಕೆ ಮದ್ದಾಗುತ್ತಾಳೆಂದು ನಂಬಿದ ಆಕೆ ತಾಯಿಯಲ್ಲ, ಸಾಕ್ಷಾತ್ ಕಾಳಿಂಗ ಸರ್ಪ! ತನ್ನ ಉದರದಲ್ಲಿ ಹುಟ್ಟಿದ ಕಂದಮ್ಮನನ್ನೇ ಮಾಟಗಾತಿಯ ಮಾತು ಕೇಳಿ ಬಲಿಪೀಠಕ್ಕೆ ಒಡ್ಡಿದ ಈಕೆಯ ಕ್ರೌರ್ಯ ನೋಡಿದರೆ ಕಲ್ಲು ಮನಸ್ಸಿನವರೂ ಕಣ್ಣೀರಿಡುತ್ತಾರೆ. ಜಾರ್ಖಂಡ್ನ ಹಜಾರಿಬಾಗ್ನಲ್ಲಿ ನಡೆದ ಈ ‘ನರಮೇಧ’ ಈಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ!

ಮನೆಯಲ್ಲಿ ಮಗನಿಗೆ ಅತಿಯಾದ ಅನಾರೋಗ್ಯ. ವಿಜ್ಞಾನದ ಮೊರೆ ಹೋಗಬೇಕಿದ್ದ ಆ ‘ಅಜ್ಞಾನಿ’ ತಾಯಿ ಹೋಗಿದ್ದು 55 ವರ್ಷದ ಶಾಂತಿ ದೇವಿ ಎಂಬ ಮಾಟಗಾತಿಯ ಬಳಿ. “ನಿನ್ನ ಮಗ ಬದುಕಬೇಕಾದರೆ, ನಿನ್ನ ಮನೆಗೆ ಅಂಟಿದ ಶಾಪ ವಿಮೋಚನೆಯಾಗಬೇಕಾದರೆ ದೇವರಿಗೆ ‘ನರಬಲಿ’ ಕೊಡಲೇಬೇಕು” ಎಂದು ಆ ಮಾಟಗಾತಿ ವಿಷ ಉಗುಳಿದ್ದಳು. ಈ ಮಾತನ್ನು ನಂಬಿದ ಆಕೆ, ತನ್ನದೇ ಮಗಳನ್ನು ಬಲಿ ಕೊಡಲು ತನ್ನ ಪ್ರಿಯಕರ ಭೀಮ್ ರಾಮ್ ಜೊತೆ ಸೇರಿ ರಕ್ತಸಿಕ್ತ ಸಂಚು ರೂಪಿಸಿದ್ದಾಳೆ!

ರಾಮನವಮಿಯ ಪವಿತ್ರ ರಾತ್ರಿ ನಡೆದ ರಕ್ತದ ಓಕುಳಿ!
ಮಾರ್ಚ್ 24ರ ರಾತ್ರಿ ಊರೆಲ್ಲಾ ರಾಮನವಮಿಯ ಭಕ್ತಿ ಪರವಶತೆಯಲ್ಲಿತ್ತು. ಮೆರವಣಿಗೆಯ ಶಬ್ದದ ನಡುವೆ ಆ ಹತ್ತು ವರ್ಷದ ಬಾಲಕಿಯ ಕಿರುಚಾಟ ಯಾರಿಗೂ ಕೇಳಿಸಲಿಲ್ಲ. ಪೂಜೆಯ ನೆಪದಲ್ಲಿ ಮಗುವನ್ನು ಬಿದಿರಿನ ತೋಪಿಗೆ ಎಳೆದುಕೊಂಡು ಹೋದ ಹಂತಕರು, ಅಲ್ಲಿ ಮೃಗಗಳಿಗಿಂತ ಹೀನವಾಗಿ ವರ್ತಿಸಿದ್ದಾರೆ. ಪ್ರಿಯಕರ ಭೀಮ್ ರಾಮ್ ಬಾಲಕಿಯ ಕತ್ತು ಹಿಸುಕುತ್ತಿದ್ದರೆ, ಹೆತ್ತ ತಾಯಿಯೇ ಮಗಳ ಕಾಲುಗಳನ್ನು ಗಟ್ಟಿಯಾಗಿ ಅದುಮಿ ಹಿಡಿದಿದ್ದಾಳೆ! ಅಮ್ಮಾ… ಬಿಟ್ಟುಬಿಡಮ್ಮ ಎಂದು ಆ ಕಂದಮ್ಮ ಎಷ್ಟು ಗೋಗರೆದರೂ ಈಕೆಯ ಪಾಷಾಣ ಹೃದಯ ಕರಗಲೇ ಇಲ್ಲ.

ಕೊಲೆ ಮಾಡುವುದಷ್ಟೇ ಇವರ ಉದ್ದೇಶವಾಗಿರಲಿಲ್ಲ. ಮಾಟಗಾತಿಯ ಆದೇಶದಂತೆ ಮೃತದೇಹದ ಮೇಲೆ ಅತೀ ಭೀಕರವಾದ ತಾಂತ್ರಿಕ ವಿಧಿವಿಧಾನಗಳನ್ನು ನಡೆಸಿದ್ದಾರೆ. ಮಗುವಿನ ಗುಪ್ತಾಂಗದೊಳಗೆ ಮರದ ಕೋಲನ್ನು ಚುಚ್ಚಿ ವಿಕೃತಿ ಮೆರೆದಿದ್ದಾರೆ. ಅಷ್ಟೇ ಅಲ್ಲದೆ, ಬಾಲಕಿಯ ತಲೆಗೆ ಬಲವಾಗಿ ಹೊಡೆದು ಅಲ್ಲಿಂದ ಹರಿದ ರಕ್ತವನ್ನು ಮಾಟಮಂತ್ರಕ್ಕೆ ಬಳಸಿಕೊಂಡಿದ್ದಾರೆ! ರಕ್ತದ ಮಡುವಿನಲ್ಲಿ ಬಿದ್ದಿದ್ದ ಆ ಮಗುವಿನ ಶವ ಮರುದಿನ ಶಾಲೆಯ ಹಿಂಭಾಗ ಸಿಕ್ಕಾಗ ಇಡೀ ಊರು ಸ್ತಬ್ಧವಾಗಿತ್ತು.

ಆರಂಭದಲ್ಲಿ ತಾನೇ ದೂರು ನೀಡಿ ನಾಟಕವಾಡಿದ್ದ ಈಕೆಯ ಮುಖವಾಡವನ್ನು ಪೊಲೀಸರು ಕಳಚಿದ್ದಾರೆ. “ತನ್ನ ಮಗನ ರೋಗ ವಾಸಿಯಾಗಲು ಮಗಳನ್ನು ಬಲಿಕೊಟ್ಟೆ” ಎಂದು ಈಕೆ ಒಪ್ಪಿಕೊಂಡಾಗ ಸ್ವತಃ ಪೊಲೀಸರೇ ದಬಾಬಕ್ಕನೆ ಕುಳಿತಿದ್ದಾರೆ. ಈಗ ತಾಯಿ, ಪ್ರಿಯಕರ ಮತ್ತು ಆ ಮಾಟಗಾತಿ ಮೂವರೂ ಕಂಬಿ ಎಣಿಸುತ್ತಿದ್ದಾರೆ.
