ಶಿರ್ವ: ಪೊಲೀಸರ ಮೇಲೆ ಕಾರ್ ಹರಿಸಿ ಕೊಲ್ಲಲು ಯತ್ನಿಸಿದ ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರು!!

ಕಾರ್ಕಳ: ಕರ್ತವ್ಯನಿರತ ಪೊಲೀಸ್ ಅಧಿಕಾರಿಗಳ ಮೇಲೆ ಕಾರು ಹರಿಸಲು ಯತ್ನಿಸಿ ಕೊಲೆ ಯತ್ನ ನಡೆಸಿದ ಹಾಗೂ ಸಂಘಟಿತ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ನಡೂರು ನಿವಾಸಿ ಸುದರ್ಶನ ಶೆಟ್ಟಿ (29), ಕೃತವ್ಯ ಶೆಟ್ಟಿ (27), ಅರುಣ್ ಶೆಟ್ಟಿ (29), ತೇಜಸ್ (28) ಮತ್ತು ಪ್ರಜ್ವಲ್ ಶೆಟ್ಟಿ (29) ಬಂಧಿತ ಆರೋಪಿಗಳು.

ಕಾರ್ಕಳದ ಹಂಚಿಕಟ್ಟೆ ಬಳಿ ತಪಾಸಣೆ ನಡೆಸುತ್ತಿದ್ದ ಪಿಎಸ್‌ಐ ಪ್ರಸನ್ನ ಎಂ.ಎಸ್. ಅವರ ತಂಡ ಕಪ್ಪು ಬಣ್ಣದ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಆರೋಪಿಗಳು ಪೊಲೀಸರ ಮೇಲೆ ಕಾರು ಹರಿಸಲು ಯತ್ನಿಸಿ ಪರಾರಿಯಾಗಿದ್ದರು. ಇದೇ ವಾಹನವನ್ನು ಶಿರ್ವ ಗ್ರಾಮದ ಪದವು ಬಳಿ ತಡೆದ ಪಿಎಸ್‌ಐ ಮಂಜುನಾಥ ಮರಬಾಡ ಅವರ ಮೇಲೂ ಚಾಲಕ ಕಾರು ಹತ್ತಿಸಲು ಯತ್ನಿಸಿದ್ದಾನೆ. ಅಂತಿಮವಾಗಿ ಶಿರ್ವ ಪಟ್ಟಣದಲ್ಲಿ ಪೊಲೀಸರು ಹರಸಾಹಸ ಪಟ್ಟು ವಾಹನವನ್ನು ತಡೆದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ವಿಚಾರಣೆ ನಡೆಸಿದಾಗ ಇವರು ದೊಡ್ಡ ಮಟ್ಟದ ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಸಾರ್ವಜನಿಕರಿಗೆ ಹಣದ ಆಮಿಷವೊಡ್ಡಿ ಜೂಜಾಟಕ್ಕೆ ಪ್ರೇರೇಪಿಸುತ್ತಿದ್ದ ಈ ತಂಡದ ವಿರುದ್ಧ ಕಾರ್ಕಳ ಮತ್ತು ಶಿರ್ವ ಪೊಲೀಸ್ ಠಾಣೆಗಳಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯಡಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

error: Content is protected !!