ಹೈದರಾಬಾದ್: ಬಸ್ ಢಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಪಘಾತದಲ್ಲಿ ಕನಿಷ್ಠ 10 ಮಂದಿ ಸಜೀವ ದಹನವಾದ ಘಟನೆ ಆಂಧ್ರಪ್ರದೇಶದ ಮಾರ್ಕಪುರಂ ಬಳಿಯ ರಾಯವರಂ ಬಳಿ ಇಂದು(ಮಾ.26) ಬೆಳಗ್ಗೆ 6 ರಿಂದ 6:30ರ ವೇಳೆಗೆ ಸಂಭವಿಸಿದೆ.


ಮಾರ್ಕಪುರಂ ಪೊಲೀಸರು ಮಾಹಿತಿ ನೀಡಿದ ಪ್ರಕಾರ, ಹರಿಕೃಷ್ಣ ಟ್ರಾವೆಲ್ಸ್ಗೆ ಸೇರಿದ ಬಸ್ ತೆಲಂಗಾಣದ ಜಗಿತಿಯಾಲ್ ನಿಂದ ಆಂಧ್ರಪ್ರದೇಶದ ವಿಂಜಾಮುರಿಗೆ ಪ್ರಯಾಣಿಸುತ್ತಿದ್ದಾಗ ಸ್ಲೇಟ್ ಕ್ವಾರಿಯ ಬಳಿ ಟಿಪ್ಪರ್ ಗೆ ಢಿಕ್ಕಿ ಹೊಡೆದಿದ್ದು, ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, 10 ಜನರು ಸಜೀವ ದಹನವಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.


ಬೆಂಕಿಯಲ್ಲಿ ಬಸ್ ಮತ್ತು ಟಿಪ್ಪರ್ ಟ್ರಕ್ ಎರಡೂ ಸಂಪೂರ್ಣವಾಗಿ ಸುಟ್ಟುಹೋಗಿವೆ. ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬಂದಿ ರಕ್ಷಣಾ ಕಾರ್ಯಾಚರಣೆಗೆ ದೌಡಾಯಿಸಿದ್ದಾರೆ.