ಕಡಬ: ಅಮ್ಮನ ಮಡಿಲಲ್ಲಿ ಆಟವಾಡಬೇಕಿದ್ದ ಆ ಪುಟ್ಟ ಜೀವ ಅಚಾತುರ್ಯದಿಂದ ಇಂದು ಚಿರನಿದ್ರೆಗೆ ಜಾರಿದೆ. ಕಡಬ ತಾಲೂಕಿನ ರಾಮಕುಂಜದ ಸಂಜೀವ ಪೂಜಾರಿ ಅವರ ಪುತ್ರ ಚಿರಾಗ್ (10) ಈಗ ಕೇವಲ ನೆನಪು ಮಾತ್ರ.

ಕಳೆದ ಕೆಲವು ಸಮಯದಿಂದ ಚಿರಾಗ್ ಪದೇ ಪದೇ ತಲೆನೋವಿನಿಂದ ಬಳಲುತ್ತಿದ್ದನು. ಮನೆಯಲ್ಲಿ ಎಲ್ಲರ ಕಣ್ಮಣಿಯಾಗಿದ್ದ ಮಗು ತಲೆನೋವು ಅಂದಾಗ ಹೆತ್ತವರು ಇನ್ನಿಲ್ಲದಂತೆ ಮರುಗುತ್ತಿದ್ದರು. ಆದರೆ, ಆ ದಿನ ತಲೆನೋವು ಬಂದಾಗ ಚಿರಾಗ್ ತಾನೇ ಔಷಧ ಸೇವಿಸಲು ಮುಂದಾಗಿದ್ದು ಕಾಲನ ಕರೆ ಎನಿಸುತ್ತದೆ. ಮನೆಯಲ್ಲಿದ್ದ ಯಾವುದೋ ಗುಳಿಗೆಯನ್ನು ತಲೆನೋವಿನ ಔಷಧವೆಂದು ಭಾವಿಸಿ ಆ ಪುಟ್ಟ ಕೈಗಳು ಸೇವಿಸಿಬಿಟ್ಟವು. ಆ ಒಂದು ಕ್ಷಣದ ಅಚಾತುರ್ಯ ಇಡೀ ಕುಟುಂಬದ ಬದುಕನ್ನೇ ಕತ್ತಲಾಗಿಸಿದೆ.

ಔಷಧ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಚಿರಾಗ್ ಅಸ್ವಸ್ಥಗೊಂಡು ಮನೆಯ ನೆಲದ ಮೇಲೆ ಹೊರಳಾಡಲು ಶುರುಮಾಡಿದಾಗ ಹೆತ್ತವರ ಎದೆ ಝಲ್ಲೆಂದಿದೆ. ಅಯ್ಯೋ ಮಗನೇ ಏನಾಯಿತು ಎಂದು ಕಿರುಚುತ್ತಾ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ಹೊತ್ತೊಯ್ದರು. ಆಸ್ಪತ್ರೆಯ ಆ ಕಾರಿಡಾರ್ಗಳಲ್ಲಿ ಮಗುವಿನ ಜೀವ ಉಳಿಸಿಕೊಡಿ ಎಂದು ಪ್ರಾರ್ಥಿಸುತ್ತಾ ಪುತ್ತೂರಿನ ಆಸ್ಪತ್ರೆಗೆ ಓಡಿದರು. ಆದರೆ, ವೈದ್ಯರು “ಬಾಲಕ ಮೃತಪಟ್ಟಿದ್ದಾನೆ” ಎಂದು ಹೇಳಿದಾಗ ಆ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಚಿರಾಗ್ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ಬುದ್ಧಿವಂತ ಬಾಲಕ. ನಾಳೆ ಶಾಲೆಗೆ ಬರುತ್ತಾನೆ ಎಂದು ಕಾಯುತ್ತಿದ್ದ ಆತನ ಗೆಳೆಯರಿಗೆ, ಪಾಠ ಮಾಡುತ್ತಿದ್ದ ಶಿಕ್ಷಕರಿಗೆ ಚಿರಾಗ್ ಇನ್ನು ಬರುವುದಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬೆನ್ನಿಗೆ ಬ್ಯಾಗು ಏರಿಸಿ ಶಾಲೆಗೆ ಕಳುಹಿಸಬೇಕಿದ್ದ ಕೈಗಳು, ಇಂದು ಆತನ ಶವಯಾತ್ರೆ ಮಾಡಬೇಕಾದ ಪರಿಸ್ಥಿತಿ ಬಂದಿರುವುದು ರಾಮಕುಂಜ ಗ್ರಾಮದ ಪ್ರತಿ ಮನೆಯ ಕಣ್ಣಲ್ಲೂ ನೀರು ತರಿಸಿದೆ.

ನಮ್ಮದೊಂದು ಮನವಿ
ಈ ಘಟನೆ ನಮಗೆಲ್ಲರಿಗೂ ಒಂದು ಎಚ್ಚರಿಕೆ. ಮನೆಯಲ್ಲಿ ಮಕ್ಕಳಿಗೆ ಎಟುಕುವಂತೆ ಔಷಧಗಳನ್ನು ಸಹಿತ ವಿಷಕಾರಿ ವಸ್ತುಗಳನ್ನು ಇಡಬೇಡಿ. ವೈದ್ಯರ ಚೀಟಿ ಇಲ್ಲದೆ ಯಾವುದೇ ಗುಳಿಗೆಯನ್ನು ಮಕ್ಕಳಿಗೆ ನೀಡದಿರಿ. ಇಂದು ಚಿರಾಗ್ ಕುಟುಂಬ ಪಡುತ್ತಿರುವ ವೇದನೆ ಮತ್ಯಾರಿಗೂ ಬಾರದಿರಲಿ.
ಕಂದಾ… ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ.