ಮಂಗಳೂರು: ಸಾಮಾನ್ಯವಾಗಿ ಉನ್ನತ ಹುದ್ದೆಗಳು, ಅಧಿಕಾರದ ಸ್ಥಾನ ಮಾನಗಳು ವ್ಯಕ್ತಿಯನ್ನು ಸಮಾಜದ ಸಂಪರ್ಕದಿಂದ ವಿಮುಖಗೊಳಿಸುತ್ತವೆ. ಆದರೆ ಅದಕ್ಕೆ ಅಪವಾದವಾಗಿ ಮನೆತನದ ಹಿರಿತನಕ್ಕೆ, ಗೆಳೆತನದ ಬಾಂಧವ್ಯಕ್ಕೆ, ಸಮುದಾಯದ ಉತ್ಕರ್ಷಕ್ಕೆ ಬದ್ಧರಾಗಿ ತಮ್ಮ ಉನ್ನತ ಸ್ಥಾನವನ್ನು ಸಾರ್ಥಕ್ಯದತ್ತ ಕೊಂಡೊಯ್ದವರು ಮುಲ್ಕಿ ಸುಂದರಾಂ ಶೆಟ್ಟಿ. ರಾಷ್ಟ್ರೀಕೃತ ವಿಜಯ ಬ್ಯಾಂಕಿನಲ್ಲಿ ಕರಾವಳಿಗರಿಗೆ ಉದ್ಯೋಗ ನೀಡಿ, ಆ ಕಾಲದ ತಲೆಮಾರಿನ ಕಡು ಕಷ್ಟದ ಬದುಕಿನಲ್ಲಿ ಓಯಸಿಸ್ ಆದವರು. ವ್ಯಕ್ತಿಗೆ ಉದ್ಯೋಗ ಭದ್ರತೆ ಇದ್ದರೆ ಕುಟುಂಬ ಅಭಿವೃದ್ಧಿಯಾಗುತ್ತದೆ, ಸಮಾಜದ ಪ್ರಗತಿಯಾಗುತ್ತದೆ ಎಂಬ ಸಿದ್ಧಾಂತವನ್ನು ನಂಬಿದ್ದ ಅವರು ಒಂದು ತಲೆಮಾರಿಗೆ ಸ್ವಾಭಿಮಾನದ ಬದುಕನ್ನು ಕೊಟ್ಟರು. ಆ ನೆನಪಿನಲ್ಲಿ ಅವರ ಜನ್ಮಭೂಮಿ ಮುಲ್ಕಿಯಲ್ಲಿ ನಿರ್ಮಾಣವಾಗಿರುವ ಮುಲ್ಕಿ ಸು೦ದರ ರಾಮ ಶೆಟ್ಟಿ ಸಭಾಭವನ ಸೇವಾ ಪರಂಪರೆಯ ಮುಂದುವರೆದ ಭಾಗ.

ಅವರು ನಮಗೆ ಹಾಕಿಕೊಟ್ಟ ಹಾದಿಯಲ್ಲಿ ಸಾಗಿ, ನಾವು ಆರಂಭ ಮಾಡಿದ ಈ ಪ್ರಯತ್ನ ಜಾತಿ, ಧರ್ಮಗಳ ಗಡಿಯನ್ನು ಮೀರಿ ಈ ಬಾರಿ 300 ಕುಟುಂಬಗಳಿಗೆ ಬೆಂಬಲ ನೀಡುವುದಕ್ಕೆ ಶಕ್ತವಾಗಿದೆ. ಒಟ್ಟು 50 ಲಕ್ಷ ರೂಪಾಯಿಗಳ ಬೆಂಬಲವನ್ನು ಸರ್ವ ಜನಾಂಗಕ್ಕೆ ಅವರವರ ಅವಶ್ಯಕತೆಗಳನ್ನು ಮೌಲ್ಯಮಾಪನಕ್ಕೆ ಒಳಪಡಿಸಿ ನೀಡಲಾಗುತ್ತಿದೆ. ಇದು ಸು೦ದರ ರಾಮ ಶೆಟ್ಟಿ ಅವರು ನಂಬಿದ ಮತ್ತು ಪಾಲಿಸಿದ ಧೈಯಾದರ್ಶಗಳನ್ನು ಪ್ರತಿಬಿಂಬಿಸುತ್ತದೆ ಎಂಬುದು ನಮ್ಮ ವಿನಮ್ರ ನಂಬಿಕೆ.

ಕಠಿಣ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ಸಮಾಧಾನದ ಉಸಿರು ಬಿಡುವ, ಶಿಕ್ಷಣದ ವೆಚ್ಚ ಭರಿಸಲು ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ಅವರ ಕನಸನ್ನು ನನಸು ಮಾಡುವ ಹಾದಿಯಲ್ಲಿ ಸಾಗಲು ಹುರಿದುಂಬಿಸುವ ಅವಕಾಶವನ್ನು ಈ ನೆರವು ಒದಗಿಸಲಿದೆ. ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ವೈದ್ಯಕೀಯ ಚಿಕಿತ್ಸೆಗೆ, ದಿವ್ಯಾಂಗರಿಗೆ ಘನತೆಯ ಬದುಕಿಗೆ ಆಸರೆಯಾಗುವುದಕ್ಕೆ ಸಹಾಯ ವಿತರಿಸಲಾಗಿದೆ. ಮನೆತನದ ಬೆಂಬಲ ಇಲ್ಲದ ಹಿರಿಯ ನಾಗರಿಕರನ್ನೂ ಈ ಪಟ್ಟಿಯಲ್ಲಿ ಪರಿಗಣಿಸಲಾಗಿದೆ. ಮದುವೆ ಮಾಡಲು, ಮನೆ ಕಟ್ಟಲು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವವರನ್ನೂ ಬೆಂಬಲಕ್ಕೆ ಆಯ್ಕೆ ಮಾಡಲಾಗಿದೆ.

ವಿಜಯ ಬ್ಯಾಂಕಿನ ವಿಜಯ ಶಿಲ್ಪಿ ಸುಂದರ ರಾಮ ಶೆಟ್ಟಿ ಶೆಟ್ಟಿ ಅವರ ನೆನಪಿನ ಈ ಉಪಕ್ರಮ ಮುಂದೆಯೂ ಅನೇಕ ಕುಟುಂಬಗಳನ್ನು, ಮನೆಗಳನ್ನು ಬೆಳಗಿಸುತ್ತದೆ ಮತ್ತು ಸಮುದಾಯ ಅಭಿವೃದ್ಧಿಯ ಕನಸಿಗೆ ಬೆಂಬಲ ನೀಡುತ್ತದೆ ಎಂಬುದು ನಮ್ಮ ಭರವಸೆ.
ಮುಲ್ಕಿ ಸು೦ದರ ರಾಮ ಶೆಟ್ಟಿ ಶೆಟ್ಟಿ ಸ್ಮಾರಕ ಚಾರಿಟೇಬಲ್ ಟ್ರಸ್ಟ್ (ನೊಂದಾಯಿತ) ವತಿಯಿಂದ ಸಹಾಯ ಹಸ್ತ ಪ್ರದಾನ ಸಮಾರಂಭ ಶನಿವಾರ(ಮಾ.14) ಬೆಳಿಗ್ಗೆ 10:30 ಗಂಟೆಗೆ ಮುಲ್ಕಿ ಸುಂದರ ರಾಮ ಶೆಟ್ಟಿ ಶೆಟ್ಟಿ ಕನ್ವೆನ್ಯನ್ ಸೆಂಟರಿನಲ್ಲಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಮುಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ದಾಯ್ದಿವರ್ಲ್ಡ್ ಸ್ಥಾಪಕ ವಾಲ್ವರ್ನಂದಳಿಕೆ ಪಾಲ್ಗೊಳ್ಳುತ್ತಾರೆ. ಮುಲ್ಕಿ ಸುಂದರಾಂ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿರುತ್ತಾರೆ.