ಸೈಕಲಿನಿಂದ ಬಿದ್ದು ಬಾಲಕ ಸಾ*ವು!

ಬಂಟ್ವಾಳ: ಬಾಲಕನೋರ್ವ ಸೈಕಲ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಶುಕ್ರವಾರ(ಮಾ.06) ಸಂಜೆ ಸಂಭವಿಸಿದೆ.

ಕೊಳ್ನಾಡು ಗ್ರಾಮದ ತಾಳಿತ್ತನೂಜಿ ದೇವಸ್ಯ ನಿವಾಸಿ ಅಬೂಬಕ್ಕರ್ ಅವರ ಮೊಮ್ಮಗನಾದ ಆಸೀಪ್(12) ಮೃತ ಬಾಲಕ.

ಆಸೀಪ್ ಮದರಸವೊಂದರಲ್ಲಿ ಆಯೋಜಿಸಲಾದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಸೈಕಲ್‌ನಲ್ಲಿ ಹಿಂತಿರುಗುವ ವೇಳೆ ರಸ್ತೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಬಾಲಕನ ದೇಹದ ಒಳಭಾಗಕ್ಕೆ ತೀವ್ರವಾದ ಪೆಟ್ಟು ತಗುಲಿದೆಯೆಂದು ತಿಳಿದುಬಂದಿದೆ. ಗಂಭೀರ ಗಾಯಗೊಂಡಿದ್ದ ಆಸೀಪ್‌ನ್ನು ತಕ್ಷಣ ಚಿಕಿತ್ಸೆಗಾಗಿ ಪಾದರ್ ಮುಲ್ಲರ್ ಆಸ್ಪತ್ರೆ ತುಂಬೆಗೆ ಸಾಗಿಸಿದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲವೆಂದು ಸ್ಥಳೀಯರು ತಿಳಿಸಿದ್ದಾರೆ.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಾಳಿತ್ತನೂಜಿಯ ವಿದ್ಯಾರ್ಥಿಯಾಗಿದ್ದ ಆಸೀಪ್ ಶಾಲೆಯ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಪ್ರತಿಭಾವಂತ ಬಾಲಕನಾಗಿದ್ದನು ಎಂದು ತಿಳಿದುಬಂದಿದೆ. ಅಜ್ಜನ ಮನೆಯಿಂದ ಶಾಲೆಗೆ ತೆರಳುತ್ತಿದ್ದ ಬಾಲಕ ತಾಯಿಗೆ ಏಕೈಕ ಮಗನಾಗಿದ್ದ. ಆಸೀಪ್‌ನ ಅಕಾಲಿಕ ನಿಧನವು ಕುಟುಂಬದವರನ್ನು ತೀವ್ರ ಆಘಾತಕ್ಕೆ ಗುರಿಮಾಡಿದ್ದು, ಬಂಧುಬಳಗ ಹಾಗೂ ಗ್ರಾಮಸ್ಥರಲ್ಲೂ ದುಃಖದ ವಾತಾವರಣ ನಿರ್ಮಾಣವಾಗಿದೆ.

error: Content is protected !!