ಬಸ್ ಮಾಲೀಕರಿಗೆ ಸರ್ಕಾರದ ಖಡಕ್ ಎಚ್ಚರಿಕೆ; 11 ರೂಲ್ಸ್ ಕಡ್ಡಾಯ

ಬೆಂಗಳೂರು: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಹಾಗೂ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ರೋಡ್ ಟ್ರಾನ್ಸ್‌ಪೋರ್ಟ್ ಸಂಸ್ಥೆಗಳ ಸೂಚನೆ ಹಿನ್ನೆಲೆ ರಾಜ್ಯ ಸಾರಿಗೆ ಇಲಾಖೆ ಖಾಸಗಿ ಬಸ್ ಮಾಲೀಕರಿಗೆ ಖಡಕ್ ನಿರ್ದೇಶನ ನೀಡಿದೆ. ಎಲ್ಲಾ ಸ್ಲೀಪರ್ ಕೋಚ್ ಮತ್ತು ಅಖಿಲ ಭಾರತ ಪ್ರವಾಸಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೆ ತರಲು ಫೆಬ್ರವರಿ 28 ವರೆಗೆ ಗಡುವು ನೀಡಲಾಗಿದೆ.

ಚಿತ್ರದುರ್ಗ ಖಾಸಗಿ ಬಸ್ ಅಗ್ನಿದುರಂತದ ನಂತರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿಸುವ ಹಿನ್ನೆಲೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕಳೆದ ತಿಂಗಳ 21ರಂದು ಖಾಸಗಿ ಬಸ್ ಮಾಲೀಕರು, ಕೋಚ್ ನಿರ್ಮಾಣ ಕಂಪನಿಗಳ ಪ್ರತಿನಿಧಿಗಳು ಹಾಗೂ ಸಾರಿಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಬಸ್ ಬಾಡಿ ನಿರ್ಮಾಣ ವಿಧಾನ, ತುರ್ತು ನಿರ್ಗಮನ ದ್ವಾರಗಳ ಸಂಖ್ಯೆ, ಅಗ್ನಿಶಾಮಕ ಸಾಧನಗಳ ಅಳವಡಿಕೆ, ಎಮರ್ಜೆನ್ಸಿ ಎಕ್ಸಿಟ್ ಬಳಿ ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ 11 ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಎಸಿ ಬಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಲ್ಲಿ ನಂದಿಸುವ ವಿಧಾನಗಳ ಬಗ್ಗೆ ಸೂಚನೆ ನೀಡಬೇಕು, ಗ್ಲಾಸ್ ಒಡೆದು ಹೊರಬರಲು ಹ್ಯಾಮರ್‌ಗಳನ್ನು ಇರಿಸಬೇಕು, ಪ್ರಯಾಣಿಕರಿಗೆ ಎಚ್ಚರಿಕೆ ಅಲಾರಂ ವ್ಯವಸ್ಥೆ ಮಾಡಬೇಕು ಹಾಗೂ ಡೋರ್ ಜಂಪ್ ಮಾಡಲು ಮೆಟ್ಟಿಲುಗಳ ಸೌಲಭ್ಯ ಒದಗಿಸಬೇಕು ಎಂದು ಸಚಿವರು ಖಾಸಗಿ ಬಸ್ ಮಾಲೀಕರಿಗೆ ಮತ್ತು ಬಸ್ ಬಾಡಿ ಬಿಲ್ಡಿಂಗ್ ಮಾಡುವ ಕಂಪನಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಕಡ್ಡಾಯಗೊಳಿಸಿರುವ 11 ರೂಲ್ಸ್:

ಸ್ಲೀಪರ್ ಬಸ್ ಗಳಲ್ಲಿ ಚಾಲಕರ ಹಿಂಬದಿ ಡೋರ್ ತೆಗೆಯಬೇಕು.
ಸ್ಲೀಪರ್ ಬರ್ತ್ ಗಳಲ್ಲಿ ಸ್ಲೈಡರ್ ತೆಗೆಯಬೇಕು.
ಫೈರ್ ಡಿಟೆಕ್ಷನ್ ತಿಂಗಳೊಳಗೆ ಅಳವಡಿಸಬೇಕು.
10ಕೆಜಿ ತೂಕದ ಅಗ್ನಿ ಶಾಮಕ ಸಾಧನ ಅಳವಡಿಕೆ ಕಡ್ಡಾಯ.
ಚಾಸಿಸ್ ಅನಧಿಕೃತ ವಿಸ್ತರಣೆಗೆ ಬ್ರೇಕ್.
ಅನುಮೋದಿತ ಟೆಸ್ಟಿಂಗ್ ಏಜೆನ್ಸಿಯಿಂದ ಪ್ರಮಾಣ ಪತ್ರ ಕಡ್ಡಾಯ.
ಪ್ರಯಾಣಿಕರ ಸೇಫ್ಟಿ ಮಾನದಂಡ ಇದ್ದರೆ ಮಾತ್ರ ಎಫ್ ಸಿ ಮಾಡಬೇಕು.
ಬಸ್ ಕವಚ ನಿರ್ಮಾಣ ಸಂಸ್ಥೆ ಸಿಂಧುತ್ವ ಪರಿಶೀಲಿಸಿದ ನಂತರವೇ ನೋಂದಣಿ ಮಾಡಬೇಕು.
ಪ್ರತಿ ಬಸ್ಸಿನಲ್ಲೂ ಚಾವಣಿಯ ಹ್ಯಾಚ್ಗಳೊಂದಿಗೆ ರೇಖಾಚಿತ್ರವನ್ನು ಪ್ರಯಾಣಿಕರಿಗೆ ಓದಲು ಅನುಕೂಲವಾಗುವಂತೆ ಪ್ರದರ್ಶನ.
12 ಮೀಟರ್ ಉದ್ದದ ಬಸ್ಸಿನಲ್ಲಿ ಕನಿಷ್ಠ 4 ತುರ್ತು ನಿರ್ಗಮನ ದ್ವಾರವಿರಬೇಕು, 12 ಮೀಟರಗಿಂತ ಹೆಚ್ಚಿದ್ದರೆ ಕನಿಷ್ಠ 5 ಡೋರ್ ಗಳಿರಬೇಕು.

 

ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ ಮಾತನಾಡಿ, ಹೆಚ್ಚಿನ ಸೂಚನೆಗಳನ್ನು ಈಗಾಗಲೇ ಪಾಲಿಸಿದ್ದೇವೆ ಎಂದು ತಿಳಿಸಿದ್ದಾರೆ. ಗಡುವಿಗೆ ಇನ್ನೂ 16 ದಿನಗಳು ಮಾತ್ರ ಬಾಕಿಯಿರುವುದರಿಂದ ಎಲ್ಲಾ ಬಸ್‌ಗಳಲ್ಲಿ ನಿಯಮಗಳು ಸಂಪೂರ್ಣ ಜಾರಿಯಾಗುತ್ತವೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

error: Content is protected !!