ತಿರುವನಂತಪುರಂ: ಇತ್ತೀಚೆಗಷ್ಟೇ ತಿರುವನಂತಪುರಂನ ನೆಯ್ಯಟ್ಟಿಂಕರದಲ್ಲಿ ನಡೆದಿದ್ದ 1 ವರ್ಷದ ಮಗುವಿನ ಸಾವಿನ ಪ್ರಕರಣದಲ್ಲಿ ಸ್ಫೋಟಕ ರಹಸ್ಯ ಬಯಲಾಗಿದೆ. ಸೆಕ್ಸ್ ವೇಳೆ ಅತ್ತ ಮಗುವನ್ನು ತಂದೆಯೇ ಹೊಟ್ಟೆ, ಎದೆ ಭಾಗಕ್ಕೆ ಗುದ್ದಿ ಕೊಲೆ ಮಾಡಿದ್ದಾನೆ ಎನ್ನುವ ಮಾಹಿತಿ ಹೊರಬಿದ್ದಿದ್ದು, ಕಟುಕ ತಂದೆಯ ಮೇಲೆ ಆಕ್ರೋಶ ವ್ಯಕ್ತವಾಗಿದೆ.

ಜನವರಿ 16 ರಂದು ಐಕಾರವಿಳಕ್ಕಂನ ಕವಲಕುಲಂನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಶಿಜಿಲ್ ಮತ್ತು ಕೃಷ್ಣಪ್ರಿಯಾ ದಂಪತಿ ತಮ್ಮ 1 ವರ್ಷದ ಮಗು ಇಹಾನ್ (ಅಪ್ಪು) ನನ್ನ ಆಸ್ಪತ್ರೆಗೆ ಕರೆತಂದಿದ್ದರು. ಬಿಸ್ಕೆಟ್, ದ್ರಾಕ್ಷಿ ತಿಂದ ಬಳಿಕ ಮಗು ಕುಸಿದು ಬಿದ್ದಿದೆ ಎಂದು ಇಬ್ಬರೂ ಹೇಳಿದ್ದರು. ಬಳಿಕ ತುರ್ತು ವಿಭಾಗದಲ್ಲಿ ಇಹಾನ್ನನ್ನ ಪರೀಕ್ಷಿಸಿದ ವೈದ್ಯರು ಅವನ ಹೊಟ್ಟೆ ಭಾಗದಲ್ಲಿ ಗಾಯವಾಗಿರುವುದನ್ನ ಪತ್ತೆಹಚ್ಚಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿ ಪೊಲೀಸರು ತನಿಖೆ ಕೈಗೆತ್ತಿಕೊಂಡರು.

ಪ್ರಾಥಮಿಕ ವಿಚಾರಣೆ ಬಳಿಕ ದಂಪತಿಯನ್ನ ಮನೆಗೆ ಕಳಿಸಿದ್ದ ಪೊಲೀಸರು ಮರಣೋತ್ತರ ಪರೀಕ್ಷಾ ವರದಿ ಹಾಗೂ ಫೊರೆನ್ಸಿಕ್ ರಿಪೋರ್ಟ್ ಬಂದ ಬಳಿಕ ಪುನಃ ವಿಚಾರಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಪತ್ನಿ ನೀಡಿದ ಹೇಳಿಕೆ ಪ್ರಕರಣಕ್ಕೆ ಟ್ವಿಸ್ಟ್ ನೀಡಿತು.

ಎರಡನೇ ಬಾರಿಗೆ ವಿಚಾರಣೆಗೆ ಹಾಜರಾದಾಗ, ʻಘಟನೆ ನಡೆದ ದಿನ ರಾತ್ರಿ ಗಂಡ ಹೆಂಡತಿ ಸೆಕ್ಸ್ ವೇಳೆ ಮಗು ಅಳಲು ಶುರು ಮಾಡಿತು. ಇದರಿಂದ ಸಿಟ್ಟಿಗೆದ್ದ ತಂದೆ ಮಗುವನ್ನ ಮಡಿಲಲ್ಲಿಟ್ಟುಕೊಂಡು ಹೊಟ್ಟೆ, ಎದೆ ಭಾಗಕ್ಕೆ ಕೈಯಲ್ಲಿ ಗುದ್ದಿದ್ದಾನೆ. ಈ ಹಿಂದೆಯೂ ಮಗುವನ್ನ ಜೊತೆಯಲ್ಲಿ ಮಲಗಿಸಿದಾಗ ಬೆಡ್ ಶೀಟ್ ನಿಂದ ಮಗುವಿನ ಮುಖ ಮುಚ್ತಿದ್ದ ಅಂತ ಪತ್ನಿ ಕೃಷ್ಣಪ್ರಿಯಾ ಹೇಳಿದ್ದಳು. ಈ ಬೆನ್ನಲ್ಲೇ ಪೋಸ್ಟ್ ಮಾರ್ಟಂ ವರದಿಯಲ್ಲೂ ಮಗು ಆಂತರಿಕ ರಕ್ತಸ್ರಾವದಿಂದ ಸಾವನ್ನಪ್ಪಿರುವುದು ದೃಢವಾಗಿತ್ತು.
ವರದಿ ಆಧರಿಸಿ ತನಿಖೆ ನಡೆಸಿದಾಗ ತಂದೆ ಶಿಜಿಲ್ ಸತ್ಯ ಬಾಯ್ಬಿಟ್ಟಿದ್ದಾನೆ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ